ADVERTISEMENT

ಸ್ವಯಂ ವಾದ ಮಂಡನೆಗೆ ರಾಜಾ ಇಚ್ಛೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ನವದೆಹಲಿ (ಐಎಎನ್‌ಎಸ್): 2ಜಿ ಸ್ಪೆಕ್ಟ್ರಂ ಪರವಾನಗಿ ಹಂಚಿಕೆ ಹಗರಣದ ಪ್ರಮುಖ ಆರೋಪಿ ಹಾಗೂ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಸುಪ್ರೀಂ ಕೋರ್ಟಿನಲ್ಲಿ ತಮ್ಮ ಪರವಾಗಿ ತಾವೇ ವಾದ ಮಂಡಿಸಲು ಅವಕಾಶ ನೀಡಬೇಕೆಂದು ಕೋರಿ ಬುಧವಾರ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಅಕ್ಟೋಬರ್ 10ರಂದು ವಿಚಾರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಜಾ ಅವರಿಗೆ ಸ್ವಯಂ ವಾದ ಮಂಡನೆಗೆ ಅವಕಾಶ ನೀಡುವಂತೆ ರಾಜಾ ಪರ ವಕೀಲ ಮನು ಶರ್ಮಾ ಅವರು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ.ಪಿ.ಸೈನಿ ಅವರಿಗೆ ಮನವಿ ಸಲ್ಲಿಸಿದರು.

`ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಸಾಕ್ಷಿಯಾಗಿ ಹಾಜರುಪಡಿಸಬೇಕು. ಅಂದು ಪರವಾನಗಿ ಹಂಚಿಕೆಯಲ್ಲಿ ಚಿದಂಬರಂ ಕೂಡಾ ಭಾಗಿಯಾಗಿದ್ದರು. ನಾನು ಅವರನ್ನು ಆರೋಪಿ ಎಂದು ಹೇಳುತ್ತಿಲ್ಲ. ಆದರೆ ಆವತ್ತಿನ ಎಲ್ಲ ಸಂದರ್ಭ, ಪರಿಸ್ಥಿತಿಗಳ ಬಗ್ಗೆ ಅವರು ಒಬ್ಬ ಸಚಿವರಾಗಿ ಸಾಕಷ್ಟು ಬಲ್ಲವರೂ ಮತ್ತು ಜವಾಬ್ದಾರಿ ವ್ಯಕ್ತಿಯೂ ಆಗಿದ್ದಾರೆ.

ಒಂದು ವೇಳೆ ಕೋರ್ಟ್ ಪ್ರಧಾನಿಯವರನ್ನೂ ಕರೆಯಿಸಬಯಸಿದ್ದೇ ಆದರೆ ಅವರನ್ನೂ ಕರೆಸಲಿ~ ಎಂಬುದು ರಾಜಾ ಅವರ ವಾದವಾಗಿದೆ. ಈ ಅರ್ಜಿಯನ್ನು ನ್ಯಾಯಾಧೀಶರು ಶುಕ್ರವಾರಕ್ಕೆ ಮುಂದೂಡಿದರು.

ಸ್ವಾಮಿ ಅರ್ಜಿ: ಶುಕ್ರವಾರ ಸುಪ್ರೀಂ ಕೋರ್ಟಿನಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜನತಾ ಪಕ್ಷದ ಅಧ್ಯಕ್ಷ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ಕುರಿತಂತೆ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಪಿ.ಚಿದಂಬರಂ ಅವರ ವಿರುದ್ಧವೂ 2ಜಿ ಸ್ಪೆಕ್ಟ್ರಂ ಪರವಾನಗಿಯ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕೆಂಬುದು ಸ್ವಾಮಿ ಅವರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.