ADVERTISEMENT

ಸ್ವಾಮಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ನವದೆಹಲಿ (ಪಿಟಿಐ): ಪ್ರಚೋದನಕಾರಿ ಲೇಖನ ಬರೆದ ಪ್ರಕರಣಕ್ಕೆ ಸಂಬಂಧಿಸಿಬಂಧನದ ಆತಂಕದಲ್ಲಿರುವ ಜನತಾ ಪಕ್ಷ  ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ದೆಹಲಿ ಹೈಕೋರ್ಟ್ ಈ ತಿಂಗಳ 30ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.

ಭವಿಷ್ಯದಲ್ಲಿ ಇಂಥ ಪ್ರಚೋದನಕಾರಿ ಲೇಖನಗಳನ್ನು ಬರೆಯುವುದಿಲ್ಲ ಎಂದು ಮುಚ್ಚಳಿಕೆಯನ್ನು ಬರೆದುಕೊಡುವಂತೆ ಹೇಳಿದ ನ್ಯಾಯಮೂರ್ತಿ ಎಂ. ಎಲ್. ಮೆಹತಾ ಅವರು ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದರು.

`ನಮ್ಮದು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ನಾವು ದೇಶದ ವ್ಯವಸ್ಥೆಯನ್ನು ಗೌರವಿಸಬೇಕು ಮತ್ತು ವೈವಿಧ್ಯತೆಯ ಬಗ್ಗೆ ಹೆಮ್ಮೆ ಪಡಬೇಕು~ ಎಂದು ನ್ಯಾಯಮೂರ್ತಿಯವರು ತಿಳಿಸಿದ್ದಾರೆ.

`2ಜಿ ಹಗರಣವನ್ನು ಬಯಲಿಗೆ ಎಳೆದಿರುವ ನನ್ನ ಕಕ್ಷಿದಾರ ಸ್ವಾಮಿ ಅವರನ್ನು ಗೋಳು ಹೊಯ್ದುಕೊಳ್ಳುವ ಉದ್ದೇಶದಿಂದ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರು ವರ್ಷಗಳ ಹಿಂದೆ ಬರೆದ ಪುಸ್ತಕದ ಆಧಾರದ ಮೇಲೆ ಬರೆದಿರುವ ಲೇಖನವು ಈಗ ಹೇಗೆ ಪ್ರಚೋದನಕಾರಿಯಾಗಲು ಸಾಧ್ಯ~ಎಂದು ಹಿರಿಯ ವಕೀಲ ಕೆ. ಟಿ. ಎಸ್. ತುಳಸಿ ವಾದಿಸಿದರು.

 ಪುಸ್ತಕ ಬರೆದು ಆರು ವರ್ಷಗಳಾದರೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈಗ ಲೇಖನ ಬರೆದ ಕೂಡಲೇ ಪೊಲೀಸರು ಪ್ರಕರಣ ದಾಖಲಿಸಿರುವ ಹಿಂದೆ ದುರುದ್ದೇಶವಿದೆ ಎಂದು ತಿಳಿಸಿದರು. 

 ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಸಂಬಂಧಿಸಿದಂತೆ ದೆಹಲಿ ಅಪರಾಧ ವಿಭಾಗದ ಪೊಲೀಸರು ಸ್ವಾಮಿ ವಿರುದ್ಧ ಕಳೆದ ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲಿಸಿದ್ದು, ಸ್ವಾಮಿ ತಮ್ಮ ವಿರುದ್ಧ ಮಾಡಲಾಗಿರುವ ಎಲ್ಲಾ ಆಪಾದನೆಗಳನ್ನೂ ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.