ADVERTISEMENT

ಸ್ವಾಮಿ ವಿರುದ್ಧ ಕೇಂದ್ರ ಗರಂ: ಸುಪ್ರೀಂಕೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:35 IST
Last Updated 20 ಜನವರಿ 2012, 19:35 IST

ನವದೆಹಲಿ (ಪಿಟಿಐ): 2ಜಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆಯ ವಿಷಯವಾದರೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಗೃಹ ಸಚಿವ ಪಿ. ಚಿದಂಬರಂ ಹಾಗೂ ಇತರ ನಾಯಕರ ವರ್ಚಸ್ಸಿಗೆ ಹಾನಿಯುಂಟು ಮಾಡುತ್ತಿರುವ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಸೂಕ್ತ ಕ್ರಮದ ಆದೇಶ ನೀಡುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಶುಕ್ರವಾರ ಒಪ್ಪಿಗೆ ಸೂಚಿಸಿದೆ.

ಈ ಬಗ್ಗೆ ಪರಿಶೀಲಿಸಿ, ವಿಚಾರಣಾ ಕಲಾಪ ನಡೆಸಬೇಕೇ ಎಂಬುದನ್ನು ನಿರ್ಧರಿಸುವುದಾಗಿ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿತು.

ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಪಿ.ಪಿ. ರಾವ್ ಈ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದಾಗ ನ್ಯಾಯಮೂರ್ತಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಯುಪಿಎ ನಾಯಕರ ವಿರುದ್ಧ ಸ್ವಾಮಿ ಮಾಡಿರುವ ಭಾಷಣ ಮತ್ತು ಹೇಳಿಕೆಯ ಪತ್ರಿಕಾ ವರದಿಗಳ ಸಾಕ್ಷ್ಯಗಳನ್ನು ರಾವ್ ನ್ಯಾಯಪೀಠಕ್ಕೆ ಸಲ್ಲಿಸಿದರು.

ಸ್ವಾಮಿಯವರು 2011ರ ಅಕ್ಟೋಬರ್ 20ರಂದು ಚೆನ್ನೈನಲ್ಲಿ `ಭ್ರಷ್ಟಾಚಾರದ ವಿರುದ್ಧ ಯುವಕರು~ ಎಂಬ ವೇದಿಕೆ ಏರ್ಪಡಿಸಿದ್ದ “2ಜಿ ಸ್ಪೆಕ್ಟ್ರಂನಲ್ಲಿ ನಿಗೂಢ ಅಂಶಗಳು” ಎಂಬ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು. ಈ ಪ್ರಚೋದನಕಾರಿ ಭಾಷಣದ ಪತ್ರಿಕಾ ವರದಿಗಳೊಂದಿಗೆ ಪ್ರಮಾಣಪತ್ರವೊಂದನ್ನು ರಾವ್ ದಾಖಲೆಯಾಗಿ ನ್ಯಾಯಪೀಠಕ್ಕೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.