ADVERTISEMENT

ಹಂತಕ ಉಮೇಶ್ ರೆಡ್ಡಿಗೆ ಗಲ್ಲು: ಎತ್ತಿಹಿಡಿದ ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 20:25 IST
Last Updated 1 ಫೆಬ್ರುವರಿ 2011, 20:25 IST

ನವದೆಹಲಿ (ಪಿಟಿಐ): ವಿಕೃತ ಕಾಮಿ ಹಾಗೂ ಹಂತಕ ಬಿ. ಎ. ಉಮೇಶ ರೆಡ್ಡಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.

ಉಮೇಶ ರೆಡ್ಡಿ ನಡೆಸಿದಂತಹ ಹಲವು ಕೃತ್ಯಗಳು ಅತ್ಯಂತ ಅಪರೂಪದ ಅಪರಾಧ ಕೃತ್ಯಗಳಾಗಿದ್ದವು ಎಂದು ತೀರ್ಮಾನಿಸಿದ ನ್ಯಾಯಮೂರ್ತಿಗಳಾದ ಅಲ್ತಮಾಸ್ ಕಬೀರ್ ಮತ್ತು ಎ.ಕೆ.ಪಾಠಕ್ ಅವರಿದ್ದ ಪೀಠ 12 ವರ್ಷಗಳ ಹಿಂದೆ ಜಯಶ್ರೀ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಕೃತ್ಯಕ್ಕಾಗಿ ಆತನಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿಯಿತು.

1998ರಲ್ಲಿ ಉಮೇಶ್ ರೆಡ್ಡಿ ಈ ಅಮಾನುಷ ಕೃತ್ಯ ಎಸಗಿದ್ದ. ಜಯಶ್ರೀ ಎಂಬ ಮಹಿಳೆಯ ಕೈಯನ್ನು ಹಿಂದಕ್ಕೆ ಕಟ್ಟಿ ಅತ್ಯಾಚಾರ ಎಸಗಿದ್ದ ಆತ ಬಳಿಕ ಆಕೆಯನ್ನು ಕೊಂದು ಹಾಕಿದ್ದ. ಮನೆಯಿಂದ ಕಾಲ್ಕೀಳುವ ಮೊದಲು ಆಭರಣಗಳನ್ನು ದೋಚಿದ್ದ.

ಇನ್ನೊಂದು ಮನೆಯಲ್ಲೂ ಇದೇ ರೀತಿಯ ಅಪರಾಧ ಎಸಗಲು ಯತ್ನಿಸಿದಾಗ ಆತನನ್ನು ಬಂಧಿಸಲಾಗಿತ್ತು. ಎಂಟು ವರ್ಷಗಳ ದೀರ್ಘ ವಿಚಾರಣೆಯ ಬಳಿಕ ಸೆಷನ್ಸ್ ನ್ಯಾಯಾಲಯ 2006ರ ಅಕ್ಟೋಬರ್ 26ರಂದು ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಕರ್ನಾಟಕ ಹೈಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.