ADVERTISEMENT

ಹಗರಣ: ಉನ್ನತ ಮಟ್ಟದ.ತನಿಖೆಗೆ ಸಿಪಿಎಂ ಆಗ್ರಹ.

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST


ನವದೆಹಲಿ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಅವರ ನೇರ ಉಸ್ತುವಾರಿಯಡಿ ಬರುವ ಬಾಹ್ಯಾಕಾಶ ಇಲಾಖೆಯ ವಿವಾದಾತ್ಮಕ ಎಸ್-ಬ್ಯಾಂಡ್ ಒಪ್ಪಂದದ ಬಗ್ಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರಿಂದ ನಿರ್ದಿಷ್ಟ ಕಾಲಮಿತಿಯೊಳಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಿಪಿಎಂ ಒತ್ತಾಯಿಸಿದೆ.ಬೊಕ್ಕಸಕ್ಕೆ ಕನಿಷ್ಠ 2 ಲಕ್ಷ ಕೋಟಿ ರೂಪಾಯಿ ನಷ್ಟವುಂಟು ಮಾಡಿರುವ ಈ ಒಪ್ಪಂದದ ಬಗ್ಗೆ ತನಿಖೆ ನಡೆಸಲು ಪ್ರಧಾನಿಯವರು ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿರುವ ವೈಖರಿ ತೀವ್ರ ಅನುಮಾನಗಳನ್ನು ಹುಟ್ಟುಹಾಕಿದೆ ಎಂದೂ ಪಕ್ಷದ ಪಾಲಿಟ್‌ಬ್ಯೂರೊ ಹೇಳಿದೆ.

ಪ್ರಧಾನಿ ರಚಿತ ಸಮಿತಿಯಲ್ಲಿರುವ ಚತುರ್ವೇದಿ ಮತ್ತು ರೊದ್ದಂ ನರಸಿಂಹ ಈ ಇಬ್ಬರೂ ಒಪ್ಪಂದದ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವರೇ ಆಗಿದ್ದಾರೆ. ಸರ್ಕಾರ ಇವರ ನೇತೃತ್ವದಲ್ಲೇ ಸಮಿತಿ ರಚಿಸಿರುವುದನ್ನು ನೋಡಿದರೆ ಸರ್ಕಾರಕ್ಕೆ ಸತ್ಯವನ್ನು ಮುಚ್ಚಿಹಾಕುವ ಉದ್ದೇಶವಿರುವಂತೆ ತೋರುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಲಾಗಿದೆ. ಸಿಎಜಿ ಅವರು  ಯಾವುದೇ ಪ್ರಭಾವಕ್ಕೆ ಒಳಗಾಗದೆ ಲೆಕ್ಕ ಪರಿಶೋಧನೆ ನಡೆಸಲು ಸೂಕ್ತ ವಾತಾವರಣ ನಿರ್ಮಿಸಬೇಕು ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT