ADVERTISEMENT

ಹಣದುಬ್ಬರ, ಭ್ರಷ್ಟಾಚಾರ ಹಗರಣ: ಕರಗುತ್ತಿದೆ ಭಾರತೀಯ ಕುಬೇರರ ಸಂಪತ್ತು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 10:55 IST
Last Updated 27 ಅಕ್ಟೋಬರ್ 2011, 10:55 IST

ನವದೆಹಲಿ (ಪಿಟಿಐ): ಹಣದುಬ್ಬರ ಮತ್ತು ಭ್ರಷ್ಟಾಚಾರ ಹಗರಣಗಳ ಪರಿಣಾಮವಾಗಿ ಭಾರತದ ಕುಬೇರರ ಸಂಪತ್ತು ಕರಗುತ್ತಿದೆ ಎಂದು ಫೋರ್ಬ್ಸ್ ನಿಯತಕಾಲಿಕ ಹೇಳಿದೆ. ಫೋರ್ಬ್ಸ್ ಪ್ರಕಾರ ಭಾರತದ 100 ಮಂದಿ ಕುಬೇರರ ಸಂಪತ್ತು ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಶೇಕಡಾ 20ರಷ್ಟು ಕುಸಿದಿದೆ.

ಫೋರ್ಬ್ಸ್ ಪ್ರಕಟಿಸಿರುವ ರಾಷ್ಟ್ರೀಯ ಕುಬೇರರ ಪಟ್ಟಿಯಂತೆ ಭಾರತದ 100 ಮಂದಿ ಅತಿ ಶ್ರೀಮಂತರ ಸಂಪತ್ತು 242 ಶತಕೋಟಿ ಅಮೆರಿಕನ್ ಡಾಲರ್ ಗಳಿಗೆ ಕುಸಿದಿದ್ದು ಈ ಕುಸಿತದ ಪ್ರಮಾಣ ಶೇಕಡಾ 20ರಷ್ಟು. ಅಂದರೆ ಅಂದಾಜು 60 ಶತಕೋಟಿಯಷ್ಟು ಸಂಪತ್ತು ಕುಸಿದಿದೆ.

ಭಾರತದ ಕೋಟ್ಯಧೀಶರ ಸಂಖ್ಯೆಯೂ ಸುಮಾರು ಒಂದು ಡಜನ್ ನಷ್ಟು ಇಳಿದಿದ್ದು, ಪ್ರಸ್ತುತ ಭಾರತದ ಕೋಟ್ಯಧೀಶರ ಸಂಖ್ಯೆ 57 ಮಾತ್ರ ಎಂದು ಫೋರ್ಬ್ಸ್ ಹೇಳಿದೆ.

ಷೇರು ಪೇಟೆ ಕುಸಿತ, ಕರೆನ್ಸಿ ಬೆಲೆಯ ಇಳಿಕೆ ಕೂಡಾ ಅವರ ಸಂಪತ್ತು ಕರಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿ ಹೇಳಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಭಾರತದ ಅತಿ ಶ್ರೀಮಂತ ಎಂಬ ತಮ್ಮ ಹೆಗ್ಗಳಕೆಯನ್ನು ಉಳಿಸಿಕೊಂಡಿದ್ದಾರೆ. ಪ್ರಸ್ತುತ ಅವರ ಸಂಪತ್ತಿನ ಮೊತ್ತ 22.6 ಶತಕೋಟಿ ಅಮೆರಿಕನ್ ಡಾಲರುಗಳು. ಕಳೆದ ಒಂದು ವರ್ಷದಲ್ಲಿ ಕರಗಿದ ಅವರ ಸಂಪತ್ತಿನ ಮೊತ್ತ 4.4ಶತಕೋಟಿ ಅಮೆರಿಕನ್ ಡಾಲರುಗಳು. ಈ ಕುಸಿತದ ಬಳಿಕವೂ ತಮ್ಮ ಮೊದಲ ಸ್ಥಾನ ಉಳಿಸಿಕೊಳ್ಳುವಲ್ಲಿ ಅವರು ಸಫಲರಾಗಿದ್ದಾರೆ.

ಮುಖೇಶ್ ಅಂಬಾನಿ ಅವರ ಕಿರಿಯ ಸಹೋದರ ಅಂಬಾನಿ ಅವರ ಸಂಪತ್ತು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕರಗಿದೆ. ಅವರ ಸಂಪತ್ತು 7.4 ಶತಕೋಟಿ ಅಮೆರಿಕನ್ ಡಾಲರುಗಳಿಂದ 5.9 ಶತಕೋಟಿ ಡಾಲರುಗಳಿಗೆ ಇಳಿದಿದೆ ಎಂದು ಫೋರ್ಬ್ಸ್ ಹೇಳಿದೆ. ಅವರ ಸ್ಥಾನ ಈ ವರ್ಷ 13ಕ್ಕೆ ಇಳಿದಿದೆ.

ಲಾಂನ್ಕೊ ಇನ್ಫ್ರೊಟೆಕ್ ನ ಮಧುಸೂದನ ರಾವ್, ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್, ಅಜೀಮ್ ಪ್ರೇಮ್ ಜಿ ಮತ್ತಿತರರ ಸಂಪತ್ತೂ ಕಳೆದ ಒಂದು ವರ್ಷದಲ್ಲಿ ಗಣನೀಯವಾಗಿ ಕುಸಿದಿದೆ ಎಂದು ಫೋರ್ಬ್ಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.