ADVERTISEMENT

ಹರಿವಂಶರಾಯ್‌ ಬಚ್ಚನ್‌ ನೆರವಿಗೆ ಬಂದಿದ್ದ ಗಾಂಧೀಜಿ

ಪಿಟಿಐ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಹರಿವಂಶರಾಯ್‌ ಬಚ್ಚನ್‌ ನೆರವಿಗೆ ಬಂದಿದ್ದ ಗಾಂಧೀಜಿ
ಹರಿವಂಶರಾಯ್‌ ಬಚ್ಚನ್‌ ನೆರವಿಗೆ ಬಂದಿದ್ದ ಗಾಂಧೀಜಿ   

ಮುಂಬೈ: ಹರಿವಂಶ ರಾಯ್‌ ಬಚ್ಚನ್‌ ಅವರ ಕವನ ಸಂಕಲನ ‘ಮಧುಶಾಲಾ’ ಕುರಿತು ಅಪಾರ ಟೀಕೆಗಳು ವ್ಯಕ್ತವಾದಾಗ ಮಹಾತ್ಮ ಗಾಂಧೀಜಿ ನೆರವಿಗೆ ಬಂದಿದ್ದನ್ನು ಖ್ಯಾತ ನಟ ಅಮಿತಾಭ್‌ ಬಚ್ಚನ್‌ ನೆನಪಿಸಿಕೊಂಡಿದ್ದಾರೆ.

‘1933ರಲ್ಲಿ ನನ್ನ ತಂದೆ ಈ ಕವನ ಸಂಕಲನವನ್ನು ರಚಿಸಿದ್ದರು. 1935ರಲ್ಲಿ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಕವನ ಸಂಕಲನಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು. ಬಳಿಕ ಟೀಕೆಗಳು ವ್ಯಕ್ತವಾಗತೊಡಗಿದವು’ ಎಂದು ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ನಡೆದ ಘಟನೆಗಳನ್ನು ವಿವರಿಸಿದ್ದಾರೆ.

‘ಮಧುಶಾಲಾ ಕವನ ಸಂಕಲನದಲ್ಲಿ ಮದ್ಯವನ್ನು ವೈಭವೀಕರಿಸಲಾಗಿದ್ದು, ಯುವಕರನ್ನು ದಾರಿ ತಪ್ಪಿಸಲಾಗಿದೆ. ಮದ್ಯದ ಕುರಿತ ಚಿತ್ರಣವನ್ನು ಸಕಾರಾತ್ಮಕವಾಗಿ ಬಿಂಬಿಸುವ ಮೂಲಕ ದೇಶದ ಯುವ ಸಮುದಾಯವನ್ನು ಹಾಳು ಮಾಡುವ ಪ್ರಯತ್ನ ಮಾಡಲಾಗಿದೆ. ಇಂತಹ ಪ್ರಯತ್ನಗಳಿಗೆ ಕಡಿವಾಣ ಹಾಕಲೇಬೇಕು ಮತ್ತು ಹರಿವಂಶ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಗಿತ್ತು. ನನ್ನ ತಂದೆಗೆ ಬೆದರಿಕೆ ಸಹ ಹಾಕಲಾಗಿತ್ತು. ಮಹಾತ್ಮ ಗಾಂಧೀಜಿ ಅವರಿಗೂ ಈ ಬಗ್ಗೆ ದೂರು ನೀಡಲಾಗಿತ್ತು’ ಎಂದು ವಿವರಿಸಿದ್ದಾರೆ.

ADVERTISEMENT

‘ಗಾಂಧೀಜಿ ಅವರು ನನ್ನ ತಂದೆಗೆ ಪತ್ರ ಬರೆದು, ನೀವು ಬರೆದಿರುವ ವಿಷಯಗಳ ಬಗ್ಗೆ ನಾನು ಕೇಳಲು ಇಚ್ಛಿಸುತ್ತೇನೆ ಎಂದು ತಿಳಿಸಿದರು. ನನ್ನ ತಂದೆ ಗಾಂಧೀಜಿ ಮುಂದೆ ಹಾಜರಾಗಿ ವಿವರಿಸಿದರು. ಬಳಿಕ, ಈ ಕವನ ಸಂಕಲನದಲ್ಲಿ ಆಕ್ಷೇಪಾರ್ಹವಾದ ಯಾವುದೇ ವಿಷಯಗಳು ಇಲ್ಲ ಎಂದು ಗಾಂಧೀಜಿ ಪ್ರತಿಕ್ರಿಯಿಸಿದರು. ಇದರಿಂದ, ನಿರಾಳವಾಗಿ ನನ್ನ ತಂದೆ ಅಲ್ಲಿಂದ ನಿರ್ಗಮಿಸಿದರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.