ADVERTISEMENT

ಹರೇನ್ ಪಾಂಡೆ ಪ್ರಕರಣ: ಬಿಡುಗಡೆಯಾದವರ ವಿರುದ್ಧ ಸಿಬಿಐ ಅರ್ಜಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 5:30 IST
Last Updated 5 ಜನವರಿ 2012, 5:30 IST

ನವದೆಹಲಿ(ಪಿಟಿಐ): ಗುಜರಾತ್ ಹೈಕೋರ್ಟ್ ರಾಜ್ಯದ ಗೃಹ ಸಚಿವ ಹರೇನ್ ಪಾಂಡೆ ಅವರ ಕೊಲೆ ಪ್ರಕರಣದ 12 ಜನ ಆರೋಪಿಗಳನ್ನು ಬಿಡುಗಡೆ ಮಾಡಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಮತ್ತು ಗುಜರಾತ್ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆಗೆ ಅಂಗೀಕರಿಸಿದೆ.

ಸಿಬಿಐ ಮತ್ತು ಗುಜರಾತ್ ಸರ್ಕಾರಗಳ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಪಿ. ಸತ್ಯಶಿವಮ್ ಮತ್ತು ಜೆ.ಚೇಮಲೇಶ್ವರ ಅವರ ಜಂಟಿ ಪೀಠ, ಪ್ರಕರಣದಲ್ಲಿ ಬಿಡುಗಡೆಯಾಗಿದ್ದ 12 ಜನ ಆರೋಪಿಗಳಿಗೆ ಅಭಿಪ್ರಾಯ ಕೇಳಿ ನೊಟೀಸ್ ಜಾರಿ ಮಾಡಿದೆ.

ಗುಜರಾತ್ ಹೈಕೋರ್ಟ್ 2010ರ ಆಗಸ್ಟ್ 29ರಂದು ಹರೇನ್ ಪಾಂಡೆ ಕೊಲೆ ಪ್ರಕರಣದ 12 ಜನ ಆರೋಪಿಗಳನ್ನು ಬಿಡುಗಡೆ ಮಾಡಿದ ಕ್ರಮ ಸರಿಯಲ್ಲ ಎಂದು ಸಿಬಿಐ ಮತ್ತು ಗುಜರಾತ್ ಸರ್ಕಾರ ತಮ್ಮ ಅರ್ಜಿಯಲ್ಲಿ ಹೇಳಿವೆ.

ADVERTISEMENT

ಅಹಮದಾಬಾದಿನಲ್ಲಿ ಕಳೆದ 2003ರ ಮಾರ್ಚ್ 26ರಂದು ಬೆಳಿಗ್ಗೆ ವಾಯುವಿಹಾರಕ್ಕೆ ಹೊರಟ ಸಂದರ್ಭದಲ್ಲಿ ಗುಜರಾತಿನ ಮಾಜಿ ಗೃಹ ಸಚಿವ ಹರೇನ್ ಪಾಂಡೆ ಅವರನ್ನು ಕೊಲೆ ಮಾಡಲಾಗಿತ್ತು. 2002ರಲ್ಲಿ  ಗುಜರಾತ್ ರಾಜ್ಯದಲ್ಲಿ ನಡೆದ ಕೋಮು ಗಲಭೆಗೆ ಪ್ರತಿಕಾರವಾಗಿ, ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ತೀರ ಹತ್ತಿರದವರಾಗಿದ್ದ ಪಾಂಡೆ ಅವರನ್ನು  ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.