ನವದೆಹಲಿ(ಐಎಎನ್ ಎಸ್): ಬಲವಂತದ ಮತಾಂತರದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಲೇಬೇಕು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಶುಕ್ರವಾರವೂ ಪಟ್ಟುಹಿಡಿದು, ಗದ್ದಲ ಎಬ್ಬಿಸಿತು. ಇದರಿಂದ ಐದನೇ ದಿನದ ಕಲಾಪ ಸುಗಮವಾಗಿ ನಡೆಯದೆ ಮಧ್ಯಾಹ್ನದ ವರೆಗೆ ಮುಂದೂಡಲಾಯಿತು. ಹೀಗಾಗಿ, ಕಲಾಪ ಹಳಿ ತಪ್ಪಿದಂತಾಗಿದೆ.
ವಿರೋಧ ಪಕ್ಷದ ಮುಖಂಡ ಗುಲಾಂ ನಬಿ ಆಜಾದ್ ಅವರು, ಪ್ರಧಾನಿ ನರೇಂದ್ರ ಮೋದಿ ಈ ವಿಷಯ ಕುರಿತಾಗಿ ಸದನದಲ್ಲಿ ಚರ್ಚೆ ನಡೆಸಿ ಪ್ರತಿಕ್ರಿಯೆ ನೀಡಲೇಬೇಕು ಎಂದು ಪಟ್ಟು ಹಿಡಿದರು.
ಆದರೆ, ಈ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದ್ದು, ಇದಕ್ಕೆ ಸಂಬಂದಪಟ್ಟ ಸಚಿವರೇ ಉತ್ತರ ನೀಡಲಿದ್ದಾರೆ ಎಂಬ ನಿಲುವಿಗೆ ಸರ್ಕಾರ ಅಂಟಿಕೊಂಡಂತೆ ತೋರಿತು.
ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಲೇ ಬೇಕು ಎಂದು ಪಟ್ಟು ಹಿಡಿದ ವಿರೋಧ ಪಕ್ಷಗಳು ಘೋಷಣೆ ಕೂಗಿ ಗದ್ದಲ ಎಬ್ಬಿಸಿ ಸದನವನ್ನು ಗೊಂದಲದ ಗೂಡಾಗಿಸಿದವು. ಇದರಿಂದಾಗಿ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಪತಿ ಪಿ.ಜೆ. ಕುರಿಯನ್ ಅವರು ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.
ಹಣಕ್ಕಾಗಿ ಪಡಿತರ ಚೀಟಿ ಮತ್ತು ಬಿಪಿಎಲ್ ಕಾರ್ಡ್ ಆಮಿಷ ತೊರಿಸಿ ಬಲವಂತದ ಮತಾಂತರ ಮಾಡುವುದು ಅಸಂವಿಧಾನಿಕ ಹಾಗೂ ಕಾನೂನುಬಾಹಿರ ಅಪರಾಧ ಎಂದು ಗುಲಾಂ ನಬಿ ಆಜಾದ್ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.