ADVERTISEMENT

ಹಿಂದುಳಿದ ವರ್ಗದ ಮಠಗಳಿಗೂ ಅನುದಾನ ನೀಡಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ನವದೆಹಲಿ: ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೂ ಹೆಚ್ಚಿನ ಅನುದಾನ ನೀಡಬೇಕೆಂದು ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಕಾಗಿನೆಲೆ ಸಂಸ್ಥಾನದ ಮಠಾಧಿಪತಿಗಳ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ 27ಸ್ವಾಮೀಜಿಗಳನ್ನು ಒಳಗೊಂಡ ಒಕ್ಕೂಟ ಮಾಡಲಾಗಿದೆ. ಈ ಒಕ್ಕೂಟದ ಆಶ್ರಯದಲ್ಲಿ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾವೇಶದ ಸ್ಥಳ ಮತ್ತು ದಿನಾಂಕ ಇನ್ನು ನಿಗದಿಯಾಗಿಲ್ಲ ಎಂದು ಜಾರಕಿಹೊಳಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶ ಯಾರ ಪರ ಅಥವಾ ವಿರುದ್ಧವೂ ಅಲ್ಲ. ಇದು ತಮ್ಮ ಮತ್ತು ಸಚಿವ ಉಮೇಶ್ ಕತ್ತಿ ನಡುವಿನ ಹೋರಾಟವಲ್ಲ. ಎಲ್ಲ ವರ್ಗಗಳನ್ನು ಸಮಾವೇಶಕ್ಕೆ ಆಹ್ವಾನಿಸಲಾಗುವುದು. ಮುಖ್ಯಮಂತ್ರಿ  ಸದಾನಂದಗೌಡ, ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವ ಜಗದೀಶ್ ಶೆಟ್ಟರ್ ಹಾಗೂ ಅನಂತ ಕುಮಾರ್ ಒಳಗೊಂಡಂತೆ ಎಲ್ಲರಿಗೂ ಆಮಂತ್ರಣ ನೀಡಲಾಗುವುದು ಎಂದರು.

ADVERTISEMENT

ಮಠಮಾನ್ಯಗಳಿಗೆ ಹೆಚ್ಚಿನ ಅನುದಾನ ಕೇಳುವುದು ತಪ್ಪಲ್ಲ. ಮಠಗಳು ಬೆಳೆದರೆ ಸಮಾಜ ಬೆಳೆಯುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರೂ ಬೆಂಬಲ ಕೊಡಬೇಕು. ಕಳೆದ ವರ್ಷ ಸರ್ಕಾರ ಮಠಗಳಿಗೆ 750ಕೋಟಿ ಹಣ ನೀಡಿತ್ತು. ಇದು ಪೂರ್ಣವಾಗಿ ಖರ್ಚಾಗಿಲ್ಲ. ಈ ಸಲ ಬಜೆಟ್‌ನಲ್ಲಿ ಸಾವಿರ ಕೋಟಿ ರೂಪಾಯಿ ಕೊಡಬೇಕು ಎಂದು ಬಾಲಚಂದ್ರ ಆಗ್ರಹಿಸಿದರು. ಒಕ್ಕೂಟದಲ್ಲಿ ಇರುವ 27 ಸ್ವಾಮೀಜಿಗಳಲ್ಲಿ ವಾಲ್ಮೀಕಿ, ಉಪ್ಪಾರ, ಬೋವಿ, ಕುಂಬಾರ, ಮರಾಠ, ದಲಿತ ಸಮುದಾಯದ ಮಠಾಧೀಶರು ಇದ್ದಾರೆ ಎಂದರು.

ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರ ಚೆನ್ನಾಗಿ ನಡೆದಿದೆ. ಒಳ್ಳೆಯ ಬಜೆಟ್ ಕೊಡಲು ಗೌಡರು ಸಿದ್ಧತೆ ನಡೆಸಿದ್ದಾರೆ. ಪದೇ ಪದೇ ನಾಯಕತ್ವದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದರು. ಜೇಟ್ಲಿ ಮತ್ತು ಪ್ರಧಾನ್ ಅವರನ್ನು ಭೇಟಿ ಮಾಡ್ದ್ದಿದು, ಇದು ಸೌಜನ್ಯದ ಭೇಟಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.