ADVERTISEMENT

ಹಿಂಸಾಚಾರಕ್ಕೆ ಮೋದಿ ಪ್ರಚೋದನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಅಹಮದಾಬಾದ್ (ಪಿಟಿಐ): 2002ರ ಗೋಧ್ರಾ ಘಟನೆ ನಂತರದ ಹಿಂಸಾಚಾರದ ವೇಳೆ, ತಮಗಿಷ್ಟ ಬಂದಂತೆ ವರ್ತಿಸಿ ಆಕ್ರೋಶವನ್ನು ವ್ಯಕ್ತಪಡಿಸಲು ಹಿಂದೂಗಳಿಗೆ ಅನುಮತಿ ನೀಡುವಂತೆ ನರೇಂದ್ರ ಮೋದಿ ಪೊಲೀಸರಿಗೆ ಆದೇಶ ನೀಡಿದ್ದರು ಎಂದು ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ತಮ್ಮ ಬಳಿ ಆರೋಪಿಸಿದ್ದಾಗಿ ನಾಗರಿಕ ಮಂಡಳಿಯ ಸದಸ್ಯರೊಬ್ಬರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಗುಜರಾತ್ ಮುಖ್ಯಮಂತ್ರಿ ಹೊಸ ವಿವಾದದಲ್ಲಿ ಸಿಲುಕಿಕೊಂಡಂತಾಗಿದೆ.

`ಹಿಂಸಾಚಾರದ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಪಾಂಡ್ಯ ತಮಗೆ ಇದನ್ನು ತಿಳಿಸಿದರು~ ಎಂದು ಮುಂಬೈ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಚ್.ಸುರೇಶ್ ಹೇಳಿದ್ದಾರೆ. ಇದೇ ವೇಳೆ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ತಮ್ಮ ಹಾಗೂ ಇನ್ನೊಬ್ಬ ಸದಸ್ಯ, ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಅವರ ಹೇಳಿಕೆಗಳನ್ನೂ ನಿರ್ಲಕ್ಷಿಸಿದೆ ಎಂದೂ ಅವರು ಆರೋಪಿಸಿದ್ದಾರೆ.

ಪಾಂಡ್ಯ ಅವರ ಹೇಳಿಕೆಯ ಆಧಾರದ ಮೇರೆಗೇ ಸಾಕ್ಷ್ಯಾಧಾರಗಳನ್ನು ರೂಪಿಸಿ ವಿಶೇಷ ತನಿಖಾ ತಂಡಕ್ಕೆ ನೀಡಲಾಗಿತ್ತು ಎಂದು ಸಹ ಸುರೇಶ್ ತಿಳಿಸಿದ್ದಾರೆ. 2003ರ ಮಾರ್ಚ್ 26ರಂದು ಪಾಂಡ್ಯ ಅವರನ್ನು ಹತ್ಯೆ ಮಾಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.