ADVERTISEMENT

ಹುಲಿ ಸಾವು ತನಿಖೆಗೆ ಹೊಸ ಮಾರ್ಗಸೂಚಿ

ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬ: ಹುಲಿ ಸಂರಕ್ಷಕರ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ನವದೆಹಲಿ (ಐಎಎನ್‌ಎಸ್): ಹುಲಿಗಳ ಸಾವಿನ ಕುರಿತು ತನಿಖೆ ನಡೆಸಲು ಅರಣ್ಯ ಅಧಿಕಾರಿಗಳಿಗೆ ಕೇಂದ್ರ ಪರಿಸರ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಕೇಂದ್ರ ಸಚಿವರ ಅನುಮೋದನೆಯ ನಿರೀಕ್ಷೆಯಲ್ಲಿದೆ.

ಇಲ್ಲಿಯವರೆವಿಗೂ ಹುಲಿ ಸಾವಿನ ತನಿಖೆ ನಡೆಸಲು ಸರ್ಕಾರ ಯಾವುದೇ ಮಾರ್ಗಸೂಚಿಗಳನ್ನು ರಚಿಸಿರಲಿಲ್ಲ. ತನಿಖೆ ನಡೆಸುವ ವಿಧಾನದ ಬಗ್ಗೆಯೂ ಸ್ಪಷ್ಟತೆ ಇರಲಿಲ್ಲ. ಈಗ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆತು ಹೊಸ ಮಾರ್ಗಸೂಚಿ ಸಿದ್ಧವಾಗಿದೆ' ಎಂದು ಹೆಸರು ಹೇಳಲಿಚ್ಛಿಸದ ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

`ಉದ್ದೇಶಿತ ಮಾರ್ಗಸೂಚಿಯಲ್ಲಿ ಹುಲಿ ಸಾವಿನ ತನಿಖೆ ನಡೆಸಲು ಇದ್ದ ಗೊಂದಲಗಳನ್ನು ನಿವಾರಿಸಲಾಗಿದೆ. ತನಿಖೆಯ ಸಮಯದಲ್ಲಿ ಯಾವ ಕ್ರಮಗಳನ್ನು ಅನುಸರಿಸಬೇಕೆಂದು ಅರಣ್ಯಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ' ಎಂದು ಅವರು ವಿವರಿಸಿದ್ದಾರೆ.

ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಸಕ್ತ ವರ್ಷ ಒಟ್ಟು 82 ಹುಲಿಗಳು ಮೃತಪಟ್ಟಿವೆ. ಒಂದು ದಶಕದಲ್ಲೇ ಅತಿ ಹೆಚ್ಚು ಹುಲಿಗಳು ಈ ವರ್ಷದಲ್ಲಿ ಸಾವನ್ನಪಿದ್ದು, ಇದರ ತನಿಖೆಗಾಗಿ ಕೇಂದ್ರ ಪರಿಸರ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಆದರೆ `ಸರ್ಕಾರ ಬಹಳ ತಡವಾಗಿ ಈ ಕ್ರಮ ಕೈಗೊಂಡಿದ್ದು, ಇದೊಂದು ನಿಷ್ಪ್ರಯೋಜಕ ತೀರ್ಮಾನ' ಎಂದು ಹುಲಿ ಸಂರಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಇತ್ತೀಚೆಗಿನ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ವರ್ಷ 82 ಹುಲಿಗಳು ಸಾವನ್ನಪ್ಪಿವೆ. ಇದರಲ್ಲಿ 53 ಹುಲಿಗಳು ಬೇಟೆಗಾರರ ಪಾಲಾಗಿವೆ. ಇಂಥ ಪ್ರಕರಣಗಳು ಹೆಚ್ಚಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸಂಭವಿಸಿವೆ. ಈ ರಾಜ್ಯಗಳಲ್ಲಿ ತಲಾ ಹತ್ತು ಹುಲಿಗಳು ಬೇಟೆಗಾರರಿಗೆ ಬಲಿಯಾಗಿವೆ. ಮಧ್ಯಪ್ರದೇಶದಲ್ಲಿ 8 ಹುಲಿಗಳು ಇದೇ ರೀತಿ ಸಾವನ್ನಪ್ಪಿವೆ. ಉಳಿದ 29 ಹುಲಿಗಳು ಸಹಜವಾಗಿ ಸತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.