ADVERTISEMENT

ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಅಸ್ತು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2010, 7:10 IST
Last Updated 17 ಡಿಸೆಂಬರ್ 2010, 7:10 IST

ನವದೆಹಲಿ: ಅನರ್ಹಗೊಂಡ ಪಕ್ಷೇತರ ಶಾಸಕರ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರನ್ನು ಪ್ರತಿವಾದಿಯನ್ನಾಗಿಸಲು ಸುಪ್ರೀಂಕೋರ್ಟ್ ಗುರುವಾರ ಅನುಮತಿ ನೀಡಿದೆ.

ಕಳೆದ ನ.15ರಂದು ಹೈಕೋರ್ಟ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಿಜೆಪಿಯ ಮುಖ್ಯ ಸಚೇತಕ ಡಿ.ಎನ್. ಜೀವರಾಜ ಹಾಗೂ ಇತರರು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲ್ತಾಮಸ್ ಕಬೀರ್ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

ಮತದಾರರನ್ನು ಪ್ರತಿವಾದಿಯನ್ನಾಗಿಸಿ ಅವರ ಹಾಗೂ ಸರ್ಕಾರದ ವಿರುದ್ಧ ಹೆಚ್ಚುವರಿ ಆರೋಪ ಮಾಡಿ ಸಲ್ಲಿಸಲಾಗಿದ್ದ ಅರ್ಜಿ ಮತ್ತು ಪಕ್ಷದ ಸೇರ್ಪಡೆಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿ ಸಲ್ಲಿಸಲಾದ ‘ತಿದ್ದುಪಡಿ ಅರ್ಜಿ’ಗಳನ್ನು ಪುರಸ್ಕರಿಸಿದ್ದ ಹೈಕೋರ್ಟ್ ಆದೇಶವನ್ನೂ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. (ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯಲ್ಲಿ ಒಂದು ಕಡೆ ‘ನಾವು ಎಂದಿಗೂ ಬಿಜೆಪಿ ತೊರೆದಿಲ್ಲ’ ಎಂದು ಬರೆಯಲಾಗಿತ್ತು. ಆದರೆ ಬಿಜೆಪಿ ತೊರೆದಿಲ್ಲ ಎಂದರೆ ಬಿಜೆಪಿ ಸೇರ್ಪಡೆಗೊಂಡಿದ್ದರು ಎಂಬುದು ಖಚಿತವಾಯಿತಲ್ಲ ಎಂದು ಸಿಎಂ ಪರ ವಕೀಲರು ವಿಚಾರಣೆ ವೇಳೆ ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ‘ನಾವು ಎಂದಿಗೂ ಬಿಜೆಪಿ ಸೇರಿಲ್ಲ’ ಎಂದು ತಿದ್ದುಪಡಿ ಮಾಡಿ ‘ತಿದ್ದುಪಡಿ ಅರ್ಜಿ’ ಸಲ್ಲಿಸಲಾಗಿತ್ತು).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.