ಮುಜಫ್ಫರ್ಪುರ (ಪಿಟಿಐ): ಕಾಂಗ್ರೆಸ್ ಹಿತಾಸಕ್ತಿ ಕಾಯಲು ತೃತೀಯ ರಂಗ ರಚನೆಯಾಗಿದೆಯೇ ಹೊರತು ಅದರಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದರು.
ಇಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ, ‘ವಾಸ್ತವವಾಗಿ ತೃತೀಯ ರಂಗ ರಚನೆಯಾಗಿದ್ದೇ ಕಾಂಗ್ರೆಸ್ ಹಿತಾಸಕ್ತಿ ಕಾಯಲು’ ಎಂದರು.
‘ಒಂದು ವರ್ಷ ಇಲ್ಲವೆ ಆರು ತಿಂಗಳ ಹಿಂದೆ ನೀವೇನಾದರೂ ತೃತೀಯ ರಂಗದ ಹೆಸರು ಕೇಳಿದ್ದೀರಾ ?, ಚುನಾವಣೆ ಸಮಯದಲ್ಲೇ ಇದು ಅಸ್ತಿತ್ವದಲ್ಲಿ ಬಂದಿದೆ. ಚುನಾವಣೆ ವ್ಯವಸ್ಥೆಯನ್ನು ಇದು ಹಾಳು ಮಾಡಬಹುದೇ ವಿನಾ ಇದರಿಂದ ದೇಶಕ್ಕೇನೂ ಉಪಯೋಗ ಇಲ್ಲ’ ಎಂದರು.
ಈಚೆಗೆ ಎನ್ಡಿಎ ಜತೆ ಗುರುತಿಸಿಕೊಂಡ ಎಲ್ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಹಾಗೂ ರಾಷ್ಟ್ರೀಯ ಲೋಕಸಮತಾ ಪಕ್ಷದ ಉಪೇಂದ್ರ ಕುಶ್ವಾಲಾ ಅವರೂ ಮೋದಿ ಜತೆಗೆ ವೇದಿಕೆಯಲ್ಲಿದ್ದರು.
ಎನ್ಡಿಎ ತೆಕ್ಕೆಗೆ ಮತ್ತಷ್ಟು ಪಕ್ಷಗಳು: ಮತ್ತಷ್ಟು ರಾಜಕೀಯ ಪಕ್ಷಗಳು ಬಿಜೆಪಿ ನೇತೃತ್ವದ ಎನ್ಡಿಎ ಸೇರಲಿವೆ ಎಂದು ನರೇಂದ್ರ ಮೋದಿ ಸುಳಿವು ನೀಡಿದರು.
‘ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್ಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ) ಕ್ಕೆ ಬಂದ ಮೇಲೆ ಮತ್ತಷ್ಟು ಪಕ್ಷಗಳು ನಮ್ಮನ್ನು ಸೇರಲು ಉತ್ಸುಕವಾಗಿವೆ. ಎನ್ಡಿಎ ವಿಸ್ತರಣೆಯಾಗುತ್ತಿದೆ’ ಎಂದರು.
‘ಮತಬ್ಯಾಂಕ್ ರಾಜಕೀಯ ಮಾಡುತ್ತಿರುವ ಬಿಹಾರದ ನಿತಿಶ್ಕುಮಾರ್ ಸರ್ಕಾರ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಮೃದು ಧೋರಣೆ ತಾಳಿದೆ ಎಂದರು.
ಮಾನನಷ್ಟ ಅರ್ಜಿ ವಜಾ
ನವದೆಹಲಿ (ಐಎಎನ್ಎಸ್): ನರೇಂದ್ರ ಮೋದಿ ವಿರುದ್ಧ ಗುಜರಾತ್ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ. ಶ್ರೀಕುಮಾರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.
ಈ ಪ್ರಕರಣದ ವಿಚಾರಣೆಗೆ ಇದುವರೆಗೆ ಶ್ರೀಕುಮಾರ್ ಅವರು ಹಾಜರಾಗದ್ದನ್ನು ಗಮನಿಸಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್ ಈ ಮೊಕದ್ದಮೆಯನ್ನು ವಜಾಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.