ಚಂಡೀಗಡ (ಪಿಟಿಐ): ಭಯೋತ್ಪಾದನೆ ಜಾಗತಿಕ ಸವಾಲಾಗಿದ್ದು, ಈ ಪಿಡುಗಿನ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹೇಳಿದರು.
ಚಂಡೀಗಡದಲ್ಲಿ ಭಾನುವಾರ ನಡೆದ ‘ಭಾರತ– ಫ್ರಾನ್ಸ್ ವಾಣಿಜ್ಯ ಶೃಂಗಸಭೆ’ಯಲ್ಲಿ ಮಾತನಾಡಿದ ಫ್ರಾಂಸ್ವಾ ಒಲಾಂಡ್ ಅವರ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ ಮೋದಿ, ‘ಭಯೋತ್ಪಾದನೆ ಎಂಬುದು ಜಾಗತಿಕ ತಾಪಮಾನದಷ್ಟೇ ಪ್ರಮುಖ ಸವಾಲು ಎಂಬ ಮಾತು ನಿಜ’ ಎಂದರು.
‘ಮಾನವೀಯತೆಯನ್ನು ಉಳಿಸಲು ಭಯೋತ್ಪಾದನೆ ವಿರುದ್ಧ ಹೋರಾಟ ಅನಿವಾರ್ಯ. ಮಾನವೀಯತೆಯಲ್ಲಿ ನಂಬಿಕೆ ಇರುವ ಎಲ್ಲರೂ ಈ ಹೋರಾಟಕ್ಕೆ ಕೈ ಜೋಡಿಸಬೇಕು’ ಎಂದು ಮೋದಿ ಹೇಳಿದರು.
‘ಭಾರತ ಮತ್ತು ಫ್ರಾನ್ಸ್ ಮಾನವೀಯತೆಯಲ್ಲಿ ನಂಬಿಕೆ ಹೊಂದಿವೆ. ಭಯೋತ್ಪಾದನೆಯನ್ನು ತೊಡೆದು ಹಾಕಲು ಮುಂದಾಗಿರುವ ಇತರೆ ದೇಶಗಳೊಂದಿಗೆ ನಾವಿದ್ದೇವೆ’ ಎಂದು ಮೋದಿ ತಿಳಿಸಿದರು.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವು ಫ್ರಾನ್ಸ್ ಜತೆಗಿರುತ್ತದೆ ಎಂದು ಒಲಾಂಡ್ ಅವರಿಗೆ ಮೋದಿ ಭರವಸೆ ನೀಡಿದರು.
ಮೂರು ದಿನಗಳ ಭಾರತ ಪ್ರವಾಸಕ್ಕೆ ಬಂದಿರುವ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಮಂಗಳವಾರ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.