ನವದಹೆಲಿ (ಪಿಟಿಐ): ಲೋಕಸಭೆಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆ ಮಂಡನೆ ವೇಳೆ ‘ಪೆಪ್ಪರ್ ಸ್ಪ್ರೇ’ ಮಾಡಿ ಕುಖ್ಯಾತರಾದ ವಿಜಯವಾಡ ಸಂಸದ ಎಲ್. ರಾಜಗೋಪಾಲ್ ತಮ್ಮ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಆತ್ಮರಕ್ಷಣೆಗಾಗಿ ಹಾಗೆ ಮಾಡಿರುವುದಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.
‘ಸಂಸತ್ತಿನಲ್ಲಿ ಗುರುವಾರ ನಡೆದಿರುವುದು ಸರಿ ಎಂದು ನಾನು ಹೇಳುತ್ತಿಲ್ಲ. ಖಂಡಿತವಾಗಿಯೂ ನಾವೆಲ್ಲರೂ ವಿಷಾದಿಸುತ್ತೇವೆ. ಇದರಿಂದ ನಾಚಿಕೆಯಾಗಿದೆ’ ಎಂದಿದ್ದಾರೆ.
ಸಹೋದ್ಯೋಗಿ ಸಂಸದರೊಬ್ಬರ ಮೇಲೆ ರಾಜಕೀಯ ವಿರೋಧಿಗಳು ಹಲ್ಲೆ ನಡೆಸಲು ಮುಂದಾದಾಗ ಅವರನ್ನು ರಕ್ಷಿಸಲು ‘ಪೆಪ್ಪರ್ ಸ್ಪ್ರೇ’ ಮಾಡಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.
‘ಆತ್ಮರಕ್ಷಣೆಗಾಗಿ ನಾನು ಏನಾದರೂ ಮಾಡಲೇಬೇಕಿತ್ತು. ಬಡಿದಾಟದಲ್ಲಿ ತೊಡಗುವುದಕ್ಕೆ ನನಗೆ ಮನಸಿರಲಿಲ್ಲ. ಬೇರೊಂದು ಪಕ್ಷದ ಸಂಸದರೊಬ್ಬರ ಮೇಲೆ ಹಲ್ಲೆ ನಡೆಯುವುದು ಕಂಡಾಗ ನಾನು ಸ್ಪ್ರೇ ಉಪಯೋಗಿಸಿದೆ’ ಎಂದು ವಿವರಿಸಿದ್ದಾರೆ. ‘ಇಂತಹ ಶಕ್ತಿಗಳಿಂದ ಬೆದರಿಕೆ ಇರುವುದರಿಂದ ಸದಾ ಪೆಪ್ಪರ್ ಸ್ಪ್ರೇ ಜೊತೆಗೆ ಇರಿಸಿಕೊಳ್ಳುತ್ತೇನೆ’ ಎಂದೂ ರಾಜಗೋಪಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.