ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿಯ ಮುನ್ನಾದಿನವಾದ ಮಂಗಳವಾರ ರಾತ್ರಿ 8 ಗಂಟೆಗೆದೇಶವನ್ನು ಉದ್ದೇಶಿಸಿ ಮಾತನಾಡಿ, ದೇಶವ್ಯಾಪಿ ಲಾಕ್ಡೌನ್ ವಿಧಿಸುವ ನಿರ್ಧಾರ ಪ್ರಕಟಿಸಿದರು. ಕಳೆದ ಗುರುವಾರ (ಮಾರ್ಚ್ 19) ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಭಾನುವಾರ (ಮಾರ್ಚ್ 22) ಜನತಾ ಕರ್ಫ್ಯೂ ಮಾಡಬೇಕು ಎಂದು ವಿನಂತಿಸಿದ್ದರು. ಅದಾದ ನಂತರ ಮತ್ತೊಮ್ಮೆ ದೇಶದ ಎದುರು ಬಂದ ಪ್ರಧಾನಿ, 'ನಿಮ್ಮ ಕುಟುಂಬದ ಸದಸ್ಯನಾಗಿ ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಮನೆಯಲ್ಲಿಯೇ ಇರಿ' ಎಂದು ಕೈಮುಗಿದು ಪ್ರಾರ್ಥಿಸಿ, ದೇಶವ್ಯಾಪಿ ಲಾಕ್ಡೌನ್ ಜಾರಿಗೊಳಿಸುವ ನಿರ್ಧಾರ ಪ್ರಕಟಿಸಿದರು.
ಪ್ರಧಾನಿ ಭಾಷಣದಲ್ಲಿ ಪ್ರಸ್ತಾಪವಾದ 10 ಅತಿಮುಖ್ಯ ಅಂಶಗಳು ಇವು...
1) ಕೊರೊನಾ ಅಂದ್ರೆ 'ಕೋ- ಕೊಯಿ, ರೊ- ರೋಡ್ ಪರ್, ನಾ- ನ ನಿಕ್ಲೆ' (ಯಾರೂ ರಸ್ತೆಗೆ ಇಳಿಯುವುದಿಲ್ಲ).
2) ಮನೆ ಎದುರು 'ಲಕ್ಷ್ಮಣ ರೇಖೆ' ಹಾಕಿಕೊಳ್ಳಿ. ಮನೆಯಿಂದ ಹೊರಗೆ ಬರಬೇಡಿ. ನೀವು ಮನೆಯಿಂದ ಹೊರಗೆ ಬಂದರೆ, ಈ ಮಾರಣಾಂತಿಕ ಕಾಯಿಲೆ ನಿಮ್ಮ ಮನೆಗೆ ಬರಬಹುದು.
3) ಇಂದು ರಾತ್ರಿ 12 ಗಂಟೆಯಿಂದ ಮುಂದಿನ 21 ದಿನಗಳ ಅವಧಿಗೆ ದೇಶವ್ಯಾಪಿ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ.
4) 'ಜಾನ್ ಹೇ ತೊ ಜಹಾನ್ ಹೆ' (ಜೀವ ಇದ್ದರೆ ಜಗತ್ತು ಇರುತ್ತೆ) ಅನ್ನೋದು ಅರ್ಥ ಮಾಡಿಕೊಳ್ಳಿ.
5) ಒಂದು ಸಮಾನ ಉದ್ದೇಶ್ಕಾಗಿ ಭಾರತೀಯರು ಒಗ್ಗೂಡಬಲ್ಲರು ಎಂಬುದನ್ನು ಮಾರ್ಚ್ 22ರ 'ಜನತಾ ಕರ್ಫ್ಯೂ' ತೋರಿಸಿಕೊಟ್ಟಿತು.
6) ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ಮಾತ್ರ ಕೊರೊನಾವೈರಸ್ ಹರಡುವುದನ್ನು ತಡೆಯಲು ಸಾಧ್ಯ.
7) ಕೇವಲ ಕಾಯಿಲೆಪೀಡಿತರಿಗೆ ಮಾತ್ರವೇ ಸಾಮಾಜಿಕ ಅಂತರ ಎಂದುಕೊಳ್ಳಬೇಡಿ. ದೇಶದ ಪ್ರಧಾನಿಗೂ ಅದು ಅನ್ವಯಿಸುತ್ತದೆ.
8) ಒಂದು ಸಣ್ಣ ಮೈಮರೆವಿಗೆಊಹಿಸಲು ಸಾಧ್ಯವಿಲ್ಲದಂಥ ಬೆಲೆ ತೆರಬೇಕಾದೀತು.
9) ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು 15 ಸಾವಿರ ಕೋಟಿ ರೂಪಾಯಿಯನ್ನು ಮಂಜೂರು ಮಾಡಿದೆ.
10) ದಿನಬಳಕೆಯ ಅವಶ್ಯ ವಸ್ತುಗಳ ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.