ಮುಂಬೈ (ಪಿಟಿಐ): ಆದಾಯ ತೆರಿಗೆ ಹಾಗೂ ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ಸೋಮವಾರ ರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ಕು ಲಾರಿಗಳನ್ನು ತಡೆದು ಕನಿಷ್ಠ ರೂ100 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಕ್ಷಿಣ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಈ ಲಾರಿಗಳನ್ನು ತಪಾಸಣೆ ಮಾಡಿ, ಚಿನ್ನ, ವಜ್ರ ಹಾಗೂ ನಗದು ಹಣ ಇದ್ದ 102 ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
`ನಗದು ಹಾಗೂ ಆಭರಣಗಳನ್ನು ಖಾಸಗಿ ಕೊರಿಯರ್ ಮೂಲಕ ಗುಜರಾತ್ಗೆ ಸಾಗಣೆ ಮಾಡಲಾಗುತ್ತಿತ್ತು. ಈ ಲಾರಿಗಳಲ್ಲಿದ್ದ 45 ಮಂದಿಯನ್ನು ಪ್ರಶ್ನೆಗೊಳಪಡಿಸಲಾಗಿದೆ' ಎಂದು ಆದಾಯ ತೆರಿಗೆ ಮಹಾನಿರ್ದೇಶಕ ಸ್ವತಂತ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಮುಂಬೈನಿಂದ ಗುಜರಾತ್ಗೆ ಕಪ್ಪು ಹಣ ಸಾಗಿಸಲಾಗುತ್ತಿತ್ತು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಲಾರಿಗಳಿಗೆ ಮುಂಬೈ ಪೊಲೀಸ್ ಸಿಬ್ಬಂದಿ ಬೆಂಗಾವಲಾಗಿದ್ದರು ಎನ್ನುವುದು ಮಹತ್ವದ ಸಂಗತಿ.
`ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಸಾಗಣೆ ಮಾಡುವ ಖಾಸಗಿ ಕೊರಿಯರ್ಗಳಿಗೆ ಬೆಂಗಾವಲು ನೀಡುವುದು ವಾಡಿಕೆ' ಎಂದು ಪೊಲೀಸರು ಹೇಳಿದ್ದಾರೆ.
`ವಶಕ್ಕೆ ಪಡೆದುಕೊಂಡಿರುವ ನಗದು ಹಾಗೂ ಆಭರಣಗಳ ಮೌಲ್ಯವನ್ನು ಸುಮಾರು 50 ಅಧಿಕಾರಿಗಳು ಲೆಕ್ಕ ಮಾಡುತ್ತಿದ್ದಾರೆ. ಇದು ಪೂರ್ಣಗೊಂಡ ನಂತರವೇ ಒಟ್ಟು ಅಂದಾಜು ಸಿಗುತ್ತದೆ' ಎಂದು ಕುಮಾರ್ ತಿಳಿಸಿದರು.
`ಈ ಹಣದ ಮೂಲ ಯಾವುದು ಎಂದು ಆದಾಯ ತೆರಿಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಒಂದು ವೇಳೆ ಇದು ಉಗ್ರರಿಗೆ ಬಟವಾಡೆಯಾಗುತ್ತಿದ್ದ ಹಣ ಎಂದಾದರೆ ಆಗ ಪ್ರಕರಣವನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ' ಎಂದು ಗೃಹ ಸಚಿವ ಆರ್.ಆರ್. ಪಾಟೀಲ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.