ನವದೆಹಲಿ : ಜಮೀನು ವಿವಾದವನ್ನು ಪರಿಹರಿಸಿಕೊಳ್ಳಬೇಕು ಎಂಬುದು ಅವರ ಮಹದಾಸೆಯಾಗಿತ್ತು. ಅದಕ್ಕಾಗಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ಆದರೆ, ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳುವುದಕ್ಕೆ ಮುನ್ನವೇ 108 ವರ್ಷದ ಅರ್ಜಿದಾರರು ಮೃತಪಟ್ಟಿದ್ಧಾರೆ.
ಅರ್ಜಿದಾರ ಮಹಾರಾಷ್ಟ್ರದ ಸೋಪನ್ ನರ್ಸಿಂಗ ಗಾಯಕ್ವಾಡ್ 1968ರಿಂದಲೇ ಈ ಪ್ರಕರಣವನ್ನುಇತ್ಯರ್ಥಪಡಿಸಿಕೊಳ್ಳಲು ಓಡಾಡುತ್ತಿ
ದ್ದರು. ಬಾಂಬೆ ಹೈಕೋರ್ಟ್ ಪ್ರಕರಣವನ್ನು ವಜಾ ಮಾಡುವ ಮುನ್ನ 27 ವರ್ಷ ಅಲ್ಲಿ ಅದು ವಿಚಾರಣೆಗೆ ಬಾಕಿ ಇತ್ತು.
ಭೂ ವಿವಾದದ ಸಂಬಂಧಿಸಿದ ಮೊಕದ್ದಮೆಯೊಂದನ್ನು 1968ರಲ್ಲಿ ಕೆಳಹಂತದ ಕೋರ್ಟ್ ಒಂದರಲ್ಲಿ ಸಲ್ಲಿಸಿದ್ದರು. ಅದು ಇಷ್ಟು ವರ್ಷಗಳ ವರೆಗೆ ಕೋರ್ಟ್ನಲ್ಲಿ ಇತ್ಯರ್ಥವಾಗದೇ ಉಳಿದಿತ್ತು. ಇದೇ 12ರಂದು ಈ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು. ಆದರೆ ಕೋರ್ಟ್ ಈ ಮೊಕದ್ದಮೆ ಯನ್ನು ಕೈಗೆತ್ತಿಕೊಳ್ಳುವ ಹಿಂದಿನ ದಿನವೇ ನರ್ಸಿಂಗ ಗಾಯಕ್ವಾಡ್ ಮೃತಪಟ್ಟಿದ್ದಾರೆ. ಈ ವಿಷಯ ಕೋರ್ಟ್ ಈ ಮೊಕದ್ದಮೆಯನ್ನು ಕೈಗೆತ್ತಿಕೊಂಡ ಬಳಿಕವೇ ತಿಳಿದುಬಂದಿದೆ. ಈಗ ಈ ಮೊಕದ್ದಮೆಯನ್ನು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು ಮುಂದುವರಿಸಲಿದ್ದಾರೆ ಎಂದು ಅವರ ಪರ ವಕೀಲ ವಿರಾಜ್ ಕದಮ್ ತಿಳಿಸಿದ್ದಾರೆ.
ಹೈಕೋರ್ಟ್ ಈ ಅರ್ಜಿ ಕುರಿತು 2015ರ ಅ.23 ಮತ್ತು 2019ರ ಫೆ.13 ರಂದು ತೀರ್ಪುಗಳನ್ನು ನೀಡಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಅರ್ಜಿ ದಾರರು ಕ್ರಮವಾಗಿ 1,467 ಮತ್ತು 267 ದಿನಗಳು ವಿಳಂಬ ಮಾಡಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಹೃಷಿಕೇಶ್ ರಾಯ್ ನೋಟಿಸ್ ನೀಡಿದ್ದರು.
ನೋಟಿಸ್ಗೆ ಉತ್ತರಿಸಿದ್ದ ವಕೀಲ ವಿರಾಜ್ ಕದಮ್, ವಯೋವೃದ್ಧ ಅರ್ಜಿ ದಾರರು ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನೆಲೆಸಿರುವವರು, ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿರುವುದನ್ನು ಅವರು ಬಹಳ ತಡವಾಗಿ ತಿಳಿದರು ಮತ್ತು ಕೋವಿಡ್ ಸಮಯದಲ್ಲಿ ಅವರಿಗೆ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಈ ಎಲ್ಲಾ ಕಾರಣಗಳಿಂದ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ತಡವಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದರು. ಬಳಿಕವೇ ಅರ್ಜಿಯನ್ನು ಕೋರ್ಟ್ ಕೈಗೆತ್ತಿಕೊಂಡಿದೆ. ಈ ಮೊಕದ್ದಮೆಯ ಎದುರು ಪಕ್ಷದವರಿಗೆ ಪ್ರತಿಕ್ರಿಯೆ ನೀಡಲು 8 ವಾರಗಳ ಕಾಲಾವಕಾಶ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.