ಲಖನೌ: ಶಾಲಾ ಕೊಠಡಿಯಲ್ಲಿ ಸೀಟಿನ ವಿಚಾರವಾಗಿ ಇಬ್ಬರು ವಿದ್ಯಾರ್ಥಿಗಳ ನಡುವೆ ಬುಧವಾರ ನಡೆದ ವಾಗ್ವಾದ ವಿಕೋಪಕ್ಕೆ ಹೋಗಿದ್ದು, ವಿದ್ಯಾರ್ಥಿಯೊಬ್ಬ ಪಿಸ್ತೂಲ್ಅನ್ನು ತಂದು ಸಹಪಾಠಿಯನ್ನು ಗುಂಡಿಕ್ಕಿ ಗುರುವಾರ ಕೊಲೆ ಮಾಡಿದ್ದಾನೆ.
ಈ ಘಟನೆ ಬುಲಂದ್ಶಹರ ಜಿಲ್ಲೆಯ ಶಿಖರ್ಪುರದ ಶಾಲೆಯಲ್ಲಿ ಸಂಭವಿಸಿದೆ.ಕುಪಿತಗೊಂಡ ವಿದ್ಯಾರ್ಥಿಯು, ಸೇನೆಯಲ್ಲಿರುವ ತನ್ನ ಸಂಬಂಧಿಯೊಬ್ಬರಿಗೆ ಸೇರಿದ ಲೈಸನ್ಸ್ವುಳ್ಳ ಪಿಸ್ತೂಲ್ ತಂದು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
‘ತನ್ನೊಡನೆ ಜಗಳ ಮಾಡಿದ್ದ ಸಹಪಾಠಿಯತ್ತ ಆರೋಪಿ ಮೂರು ಗುಂಡು ಹಾರಿಸಿದ್ದಾನೆ. ನಂತರ ಆರೋಪಿ, ಪಿಸ್ತೂಲ್ಅನ್ನು ತೋರಿಸುತ್ತಾ, ಗಾಳಿಯಲ್ಲಿ ಗುಂಡು ಹಾರಿಸುತ್ತಾ ಪರಾರಿಯಾಗಲು ಯತ್ನಿಸಿದ್ದಾನೆ. ಭಯಭೀತರಾದ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಯ ವಿವಿಧ ಕಡೆಗಳಲ್ಲಿ ಅವಿತುಕೊಂಡಿದ್ದಾರೆ. ಆದರೂ, ಶಾಲೆಯ ಪ್ರಾಚಾರ್ಯರು ಮುಖ್ಯದ್ವಾರವನ್ನು ಬಂದ್ ಮಾಡಿಸಿ, ಆರೋಪಿಯನ್ನು ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾದರು’ ಎಂದು ಪೊಲೀಸರು ತಿಳಿಸಿದರು.
‘ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವಿದ್ಯಾರ್ಥಿ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದೂ ಪೊಲೀಸರು ಮಾಹಿತಿ ನೀಡಿದರು.
ಆರೋಪಿ ವಿದ್ಯಾರ್ಥಿಯ ಬಳಿ ಇನ್ನೊಂದು ಕಂಟ್ರಿ ಪಿಸ್ತೂಲ್ ಸಹ ಪತ್ತೆಯಾಗಿದೆ. ಮೃತ ವಿದ್ಯಾರ್ಥಿ ಪಾಲಕರು, ‘ಆರೋಪಿ ಎರಡು ಪಿಸ್ತೂಲ್ಗಳನ್ನು ಶಾಲೆಗೆ ಹೇಗೆ ತೆಗೆದುಕೊಂಡ ಬಂದ ಎಂಬ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.