ADVERTISEMENT

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅನುಚಿತ ವರ್ತನೆ ಆರೋಪ: ಬಿಜೆಪಿಯ 12 ಶಾಸಕರ ಅಮಾನತು

ಪಿಟಿಐ
Published 5 ಜುಲೈ 2021, 14:13 IST
Last Updated 5 ಜುಲೈ 2021, 14:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಭಾಸ್ಕರ್‌ ಜಾಧವ್‌ ಅವರ ಜೊತೆಗೆ ಅವರ ಕಚೇರಿಯಲ್ಲಿಯೇ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದ ಅವಧಿಗೆ ವಿಧಾನಸಭೆಯಿಂದ ಅಮಾನತುಪಡಿಸಲಾಗಿದೆ.

12 ಶಾಸಕರನ್ನು ಸದನದಿಂದ ಅಮಾನತುಪಡಿಸಬೇಕು ಎಂಬ ನಿಲುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಮಂಡಿಸಿದ್ದು, ಸದನ ಇದನ್ನು ಧ್ವನಿಮತದಿಂದ ಅಂಗೀಕರಿಸಿತು.

ಸಂಜಯ್‌ ಕುಟೆ, ಆಶೀಷ್ ಶೆಲಾರ್‌, ಅಭಿಮನ್ಯು ಪವಾರ್‌, ಗಿರೀಶ್‌ ಮಹಾಜನ್‌, ಅತುಲ್‌ ಭಟ್ಕಲ್ಕರ್‌, ಪರಾಗ್‌ ಅಲ್ವಾಣಿ, ಹರೀಶ್‌ ಪಿಂಪಾಲೆ, ಯೋಗೇಶ್‌ ಸಾಗರ್‌, ಜಯ್‌ ಕುಮಾರ್‌ ರಾವತ್‌, ನಾರಾಯಣ್‌ ಕುಚೆ, ರಾಮ್‌ ಸತ್ಪುಟೆ ಮತ್ತು ಬಂಟಿ ಬಾಂಗ್ಡಿಯಾ ಅಮಾನತುಗೊಂಡ ಶಾಸಕರು.

ADVERTISEMENT

ಅಮಾನತು ಅವಧಿಯಲ್ಲಿ ಈ ಶಾಸಕರಿಗೆ ಮುಂಬೈ, ನಾಗಪುರದಲ್ಲಿರುವ ಸಚಿವಾಲಯದ ಅವರಣಕ್ಕೆ ಪ್ರವೇಶ ನೀಡಲಾಗುವುದಿಲ್ಲ ಎಂದು ಪರಬ್‌ ತಿಳಿಸಿದರು. ಅಮಾನತು ಕ್ರಮಕ್ಕೆ ಆಕ್ಷೇಪಿಸಿದ ಬಿಜೆಪಿ ಶಾಸಕರು ಮುಖಂಡ ದೇವೇಂದ್ರ ಫಡಣವೀಸ್ ನೇತೃತ್ವದಲ್ಲಿ ಕಲಾಪ ಬಹಿಷ್ಕರಿಸಲಾಗುವುದು ಎಂದು ಪ್ರಕಟಿಸಿದರು.

‘ಇವು ಸುಳ್ಳು ಆರೋಪಗಳು. ಬಿಜೆಪಿಯ ಯಾವ ಶಾಸಕರು ನಿಂದನೆ ಮಾಡಿಲ್ಲ. ಶಿವಸೇನೆಯ ಶಾಸಕರು ಅವಾಚ್ಯ ಪದ ಬಳಸಿದ್ದಾರೆ. ಬಿಜೆಪಿ ಶಾಸಕ ಆಶೀಷ್‌ ಶೆಲಾರ್‌ ಕ್ಷಮೆಯಾಚಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿದಿದೆ. ಜಾಧವ್‌ ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ’ ಎಂದು ದೇವೇಂದ್ರ ಫಡಣವೀಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.