ತಿರುವನಂತಪುರ: ಹಲವು ಜನರ ಭವಿಷ್ಯವನ್ನೇ ಬದಲಿಸಿರುವ ಕೇರಳ ರಾಜ್ಯ ಲಾಟರಿ, ಈ ಬಾರಿ ಕಣ್ಣೂರು ಮೂಲದ ದಿನಗೂಲಿ ನೌಕರನೊಬ್ಬನಿಗೆ ಒಲಿದಿದೆ.
ಕಣ್ಣೂರು ನಗರದಿಂದ 40 ಕಿ.ಮೀ. ದೂರದಲ್ಲಿರುವ ಮಾಲೂರಿನ ಪೆರುನನ್ ರಾಜನ್ ಕ್ರಿಸ್ಮಸ್–ಹೊಸವರ್ಷದ ಬಂಪರ್ ಲಾಟರಿಯಲ್ಲಿ ₹ 12 ಕೋಟಿ ಗೆದ್ದುಕೊಂಡಿದ್ದು, ತೆರಿಗೆ ಕಡಿತದ ಬಳಿಕ ಅಂದಾಜು ₹7 ಕೋಟಿ ರಾಜನ್ ಕೈಸೇರಲಿದೆ. 58 ವರ್ಷದ ರಾಜನ್ ಆರ್ಥಿಕ ಸಂಕಷ್ಟದಲ್ಲಿರುವ ವೇಳೆಯೇ ಅದೃಷ್ಟ ಒಲಿದಿದೆ. ಇಬ್ಬರು ಹೆಣ್ಣುಮಕ್ಕಳ ಪೈಕಿ ಹಿರಿಯ ಮಗಳಿಗೆ ಮದುವೆ ಮಾಡಿದ್ದ ರಾಜನ್, ₹ 5 ಲಕ್ಷಕ್ಕೂ ಮೀರಿ ಸಾಲ ಮಾಡಿದ್ದರು.
‘ನನ್ನ ಬಳಿ ಹಣವಿದ್ದಾಗ ಲಾಟರಿ ಖರೀದಿಸುತ್ತಿದ್ದೆ. ಸಾಲದ ನಡುವೆ ₹300 ನೀಡಿ ಬಂಪರ್ ಲಾಟರಿ ಖರೀದಿಸಿದ್ದಕ್ಕೆ ಪತ್ನಿಯೂ ಅಸಮಾಧಾನಗೊಂಡಿದ್ದಳು. ಮೊದಲು ಸಾಲ ತೀರಿಸುತ್ತೇನೆ. ಉಳಿದ ಹಣವನ್ನು ಏನು ಮಾಡಬೇಕೆಂದು ಇನ್ನೂ ಯೋಚಿಸಿಲ್ಲ’ ಎಂದು ರಾಜನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.