ಮುಂಬೈ: ಅಕ್ಟೋಬರ್ 13ರಂದು ಪೆಟ್ರೋಲ್ ವಿತರಕರು ನಡೆಸಲು ತೀರ್ಮಾನಿಸಿದ್ದ ದೇಶವ್ಯಾಪಿ ಮುಷ್ಕರವನ್ನು ಕೈಬಿಟ್ಟಿದ್ದಾರೆ. ತೈಲ ಕಂಪನಿಗಳು ಮಾತುಕತೆಗೆ ಮುಂದಾದ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಈ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.
ಕಮಿಷನ್ ಹೆಚ್ಚಳ ಮತ್ತು ತೈಲ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲು ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ (ಯುಪಿಎಫ್) ತೀರ್ಮಾನಿಸಿತ್ತು.
2016ರ ನವೆಂಬರ್ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಮತ್ತು ವಿತರಕರ ಮಧ್ಯೆ ಒಪ್ಪಂದ ನಡೆದಿತ್ತು. ಅದರಂತೆ ಪ್ರತಿ ಆರು ತಿಂಗಳಿಗೆ ಒಮ್ಮೆ ವಿತರಕರಿಗೆ ನೀಡುವ ಕಮಿಷನ್ ದರ ಪರಿಷ್ಕರಣೆ, ಕಾರ್ಮಿಕರು, ಸಾರಿಗೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ನಷ್ಟ ನಿರ್ವಹಣೆ ಮೊತ್ತ ನೀಡಬೇಕು ಎಂದು ವಿತರಕರ ಒಕ್ಕೂಟ ಬೇಡಿಕೆ ಸಲ್ಲಿಸಿತ್ತು. ಈ ಎಲ್ಲಾ ಬೇಡಿಕೆಗಳನ್ನು ತೈಲ ಕಂಪೆನಿಗಳು ನಿರ್ಲಕ್ಷ್ಯಮಾಡಿದ್ದರಿಂದ ಯುಪಿಎಫ್ ಮುಷ್ಕರ ಹೂಡಲು ಮುಂದಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.