ಭುವನೇಶ್ವರ: ಕೋವಿಡ್ ಐಸೊಲೇಷನ್ ಕೇಂದ್ರವಾಗಿ ಪರಿವರ್ತಿಸಿದ್ದ ರೈಲು ಬೋಗಿಯ ಮೇಲೇರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 13 ವರ್ಷದ ಬಾಲಕ ವಿದ್ಯುತ್ ತಂತಿಗೆ ಸಿಲುಕಿ ಸಜೀವ ದಹನಗೊಂಡ ಘಟನೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಆತನೊಂದಿಗೆ ಇದ್ದ ಇಬ್ಬರು ಸ್ನೇಹಿತರಿಗೂ ಸುಟ್ಟ ಗಾಯಗಳಾಗಿವೆ.
ಪಿ ಸೂರ್ಯ ಮತ್ತು ಆತನ ಇಬ್ಬರು ಸ್ನೇಹಿತರು ಪಾರ್ಲಕೇಮುಂಡಿ ರೈಲ್ವೆ ನಿಲ್ದಾಣದಲ್ಲಿದ್ದ ರೈಲ್ವೆ ಬೋಗಿಯ ಮೇಲೆ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ತಾಗಿ ಸೂರ್ಯ ಸ್ಥಳದಲ್ಲೇ ಸುಟ್ಟು ಮೃತಪಟ್ಟಿದ್ದಾನೆ. ಆತನ ಇಬ್ಬರು ಸ್ನೇಹಿತರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯಲ್ಲಿ ಬೋಗಿಯ ಚಾವಣಿಯೂ ಕೂಡ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕಗಳನ್ನು ಬಳಸಿ ಬೆಂಕಿ ನಂದಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಬೋಗಿಗಳನ್ನು ಕೋವಿಡ್ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲಾಗುತ್ತಿತ್ತು. ನಿಲ್ದಾಣದ ಎರಡನೇ ಮಾರ್ಗದಲ್ಲಿ ಇವುಗಳನ್ನು ನಿಲ್ಲಿಸಲಾಗಿತ್ತು. ಮುಖ್ಯದ್ವಾರದಿಂದ ಸುಮಾರು 100 ಮೀಟರ್ ದೂರದಲ್ಲಿ ಅವುಗಳಿದ್ದವು.
ಘಟನೆಯ ತನಿಖೆಗಾಗಿ ವಾಲ್ಟೇರ್ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ಕಿರಿಯ ಆಡಳಿತ ತಂಡವನ್ನು ರೈಲ್ವೆ ಇಲಾಖೆ ರಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.