ADVERTISEMENT

136 ಬಂಧಿತ ಭಾರತೀಯ ಮೀನುಗಾರರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 17:25 IST
Last Updated 18 ಫೆಬ್ರುವರಿ 2011, 17:25 IST

ನವದೆಹಲಿ/ಕೊಲಂಬೊ (ಪಿಟಿಐ): ತನ್ನ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಿದ್ದ 136 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ.

 ಈ ಕ್ರಮಕ್ಕಾಗಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಶ್ರೀಲಂಕಾ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.ನ್ಯಾಯಾಲಯವೊಂದರ ಆದೇಶದ ಮೇರೆಗೆ ಲಂಕಾ ಆಡಳಿತವು ಭಾರತೀಯ ಮೀನುಗಾರರು ಮತ್ತು ಅವರ ದೋಣಿಗಳನ್ನು ಬಿಡುಗಡೆ ಮಾಡಿದೆ.

ಇದಕ್ಕೂ ಮುನ್ನ, ತನ್ನ ದೇಶದ ಮೀನುಗಾರರ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಭಾರತ, ತಕ್ಷಣ ಬಿಡುಗಡೆ ಮಾಡುವಂತೆ ಗುರುವಾರವಷ್ಟೇ ಲಂಕಾ ಸರ್ಕಾರವನ್ನು ಕೋರಿತ್ತು.

ಬಂಧಿತ ಭಾರತೀಯ ಮೀನುಗಾರರ ಬಿಡುಗಡೆ ಸಂದೇಶವನ್ನು ಲಂಕಾ ವಿದೇಶಾಂಗ ಸಚಿವ ಜಿ.ಎಲ್. ಪೆರಿಸ್ ಅವರು ತಮಗೆ ತಿಳಿಸಿರುವುದನ್ನು ಕೃಷ್ಣ ಅವರು ಖಚಿತಪಡಿಸಿದರು.

ಈ ಸಂಬಂಧ ಮಧ್ಯಪ್ರವೇಶಿಸಿದ ಅಲ್ಲಿನ ಸರ್ಕಾರ ತಕ್ಷಣ ಸೂಕ್ತ ಕ್ರಮಕ್ಕಾಗಿ ಅಟಾರ್ನಿ ಜನರಲ್ ಮತ್ತು ಅಧೀನ ಅಧಿಕಾರಿಗಳಿಗೆ ಆದೇಶಿಸಿತ್ತು ಎಂದು ಅವರು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.