ADVERTISEMENT

ಹರಿಯಾಣ: ಖಾಸಗಿ ವಲಯದಲ್ಲಿ ಮೀಸಲುತಡೆಯಾಜ್ಞೆ ತೆರವುಗೊಳಿಸಿದ ‘ಸುಪ್ರೀಂ’

ಪಿಟಿಐ
Published 17 ಫೆಬ್ರುವರಿ 2022, 10:59 IST
Last Updated 17 ಫೆಬ್ರುವರಿ 2022, 10:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಖಾಸಗಿ ಕ್ಷೇತ್ರದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಮೀಸಲು ಕುರಿತ ಹರಿಯಾಣ ಸರ್ಕಾರದ ಕಾಯ್ದೆಯ ಜಾರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ತೆರವುಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌ ಮತ್ತು ಪಮಿಡಿಘಟಂ ಶ್ರೀ ನರಸಿಂಹ ಅವರಿದ್ದ ಪೀಠವು, ಇದೇ ಸಂದರ್ಭದಲ್ಲಿ ‘ರಾಜ್ಯದಲ್ಲಿ ಉದ್ಯೋಗದಾತರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬಾರದು’ ಎಂದೂ ಹರಿಯಾಣ ಸರ್ಕಾರಕ್ಕೆ ನಿರ್ದೇಶಿಸಿತು.

‘ವಿಷಯದ ಮಹತ್ವ ಕುರಿತು ನಾವು ಚರ್ಚಿಸುವುದಿಲ್ಲ. ಆದರೆ, ನಾಲ್ಕು ವಾರಗಳಲ್ಲಿ ತೀರ್ಮಾನಿಸಬೇಕು ಎಂದು ಹೈಕೋರ್ಟ್‌ಗೆ ಕೋರುತ್ತೇವೆ. ಸಂಬಂಧಿಸಿದವರು ವಿಚಾರಣೆಗೆ ದಿನ ಗೊತ್ತುಪಡಿಸುವ ವೇಳೆ ಕೋರ್ಟ್‌ನಲ್ಲಿ ಹಾಜರಿರಬೇಕು’ ಎಂದು ತಿಳಿಸಿತು.

ADVERTISEMENT

‘ಮಧ್ಯಂತರ ತಡೆಯಾಜ್ಞೆ ನೀಡಲು ಸೂಕ್ತ ಕಾರಣವನ್ನು ಹೈಕೋರ್ಟ್‌ ನೀಡಿಲ್ಲ. ಹೀಗಾಗಿ, ತಡೆಯಾಜ್ಞೆ ತೆರವುಗೊಳಿಸುತ್ತಿದ್ದೇವೆ’ ಎಂದು ತಿಳಿಸಿತು. ಹರಿಯಾಣ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು, ‘ಇಂಥದೇ ಸ್ವರೂಪದ ಕಾಯ್ದೆಗಳನ್ನು ಆಂಧ್ರಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರದಲ್ಲಿಯೂ ತರಲಾಗಿದೆ’ ಎಂಬುದನ್ನು ಪೀಠದ ಗಮನಕ್ಕೆ ತಂದರು.

ಫರೀದಾಬಾದ್ ಉದ್ಯಮಿಗಳ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಶ್ಯಂತ ದವೆ, ‘ಇದು ಆರ್ಥಿಕ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ. ಭೌಗೋಳಿಕ ಆಧಾರದಲ್ಲಿ ಸರ್ಕಾರ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸಬಹುದೇ ಎಂಬುದು ಮುಖ್ಯವಾದ ಪ್ರಶ್ನೆ. ಹರಿಯಾಣದಲ್ಲಿ 48 ಸಾವಿರ ಉದ್ದಿಮೆಗಳಿದ್ದು, ಕಾಯ್ದೆಯಿಂದಾಗಿ ಹೊರಗಿನವರನ್ನು ನೇಮಿಸಲಾಗದ ಸ್ಥಿತಿ ಇದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.