ನವದೆಹಲಿ (ಪಿಟಿಐ): 1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ವಿರುದ್ಧದ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಲು ದೆಹಲಿ ನ್ಯಾಯಾಲಯ ಆದೇಶಿಸಿದೆ.
ಟೈಟ್ಲರ್ ಅವರನ್ನು ದೋಷಮುಕ್ತಗೊಳಿಸಿ ಸಿಬಿಐ ಸಲ್ಲಿಸಿದ್ದ ಅಂತಿಮ ತನಿಖಾ ವರದಿಯನ್ನು ಕೋರ್ಟ್ ತಳ್ಳಿಹಾಕಿದೆ.
ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಹಾಗೂ ಗಲಭೆ ಬಗ್ಗೆ ಮಾಹಿತಿ ಗೊತ್ತಿದ್ದ ವ್ಯಕ್ತಿಗಳನ್ನು ಪ್ರಶ್ನಿಸುವಂತೆ ಸಿಬಿಐಗೆ ಕೋರ್ಟ್ ನಿರ್ದೆಶಿಸಿದೆ.
ಸಿಬಿಐ ಅಂತಿಮ ತನಿಖಾ ವರದಿ ಅಂಗೀಕರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಅನುರಾಧಾ ಶುಕ್ಲಾ ಭಾರದ್ವಾಜ್ ತಳ್ಳಿಹಾಕಿದರು.
ಸಿಬಿಐ ಪ್ರತಿಕ್ರಿಯೆ: ಮುಂದಿನ ಹೆಜ್ಜೆ ಇಡುವ ಮುನ್ನ ಕೋರ್ಟ್ ಆದೇಶವನ್ನು ಪರಿಶೀಲಿಸುವುದಾಗಿ ಸಿಬಿಐ ಪ್ರತಿಕ್ರಿಯಿಸಿದೆ.
`ಅಮೆರಿಕ ಮೂಲದ ಸಾಕ್ಷಿಯಿಂದ ಹೇಳಿಕೆ ಪಡೆಯುವುದಕ್ಕೆ ತಂಡವನ್ನು ಕಳಿಸಲಾಗಿತ್ತು. ಆದರೆ ಆತನ ಹೇಳಿಕೆಯು ಪುರಾವೆ ರೂಪದಲ್ಲಿ ಇರಲಿಲ್ಲ. ಈ ಪ್ರಕರಣದಲ್ಲಿ ಟೈಟ್ಲರ್ ಪಾತ್ರ ಇದೆ ಎನ್ನುವುದಕ್ಕೆ ತಮ್ಮ ಬಳಿ ಮಾಹಿತಿ ಇದೆ ಎಂದು ಹೇಳಿಕೊಂಡಿದ್ದ ಇನ್ನೂ ಮೂವರ ಹೆಸರನ್ನು ಆತ ನೀಡಿದ್ದ. ಆದರೆ ಈ ಮೂವರು ನಿಜವಾದ ಸಾಕ್ಷಿಗಳಲ್ಲ' ಎಂದು ಸಿಬಿಐ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.