ನವದೆಹಲಿ (ಪಿಟಿಐ): ದೂರವಾಣಿ ಪರವಾನಗಿ ಹಂಚಿಕೆ ಮಾಡುವಾಗ ಸ್ವಾನ್ ಟೆಲಿಕಾಂ ಹಾಗೂ ಯೂನಿಟೆಕ್ ಕಂಪೆನಿಗಳಿಗೆ ಮೊದಲ ಆದ್ಯತೆ ನೀಡುವಂತೆ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಹಾಗೂ ಅವರ ಸಚಿವಾಲಯದ ಸಿಬ್ಬಂದಿ ದೂರಸಂಪರ್ಕ ವಿಭಾಗದ ಮೇಲೆ ಬಲತ್ಕಾರ ಹೇರಿದ್ದರು ಎಂದು ಸಿಬಿಐ ಹೇಳಿದೆ.
ಟಾಟಾ ಟೆಲಿ ಸರ್ವೀಸಸ್ ಬದಲಿಗೆ ಈ ಕಂಪೆನಿಗಳಿಗೇ ಪ್ರಥಮ ಪ್ರಾಶಸ್ತ್ಯ ನೀಡುವಂತೆ ರಾಜಾ ಅವರ ಆಪ್ತ ಕಾರ್ಯದರ್ಶಿ ಆರ್.ಕೆ.ಚಂದೋಲಿಯ ಅವರು ದೂರಸಂಪರ್ಕ ವಿಭಾಗಕ್ಕೆ ಒತ್ತಡ ಹೇರಿದ್ದರು ಎಂಬ ಅಂಶವನ್ನು ಸಿಬಿಐ ಜಂಟಿ ಸಂಸದೀಯ ಸಮಿತಿಗೆ ತಿಳಿಸಿದೆ.
2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಮಿತಿಯ ಮುಂದೆ ಈ ಕುರಿತು ಸಿಬಿಐನ ನಿರ್ದೇಶಕ ಎ.ಪಿ.ಸಿಂಗ್ ಸಂಪೂರ್ಣ ವಿವರಣೆ ನೀಡಿದರು.
ದೂರಸಂಪರ್ಕ ಪರವಾನಗಿ ಹಂಚಿಕೆಯಲ್ಲಿ ಯಾವ್ಯಾವ ಕಂಪೆನಿಗಳಿಗೆ ಆದ್ಯತೆ ನೀಡಲಾಯಿತು ಮತ್ತು ಅಕ್ರಮಗಳನ್ನು ಎಸಗುವ ಉದ್ದೇಶ ದಿಂದಲೇ ದೂರಸಂಪರ್ಕ ವಿಭಾಗದ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಅವರನ್ನು ಅವರ ಸ್ಥಾನದಿಂದ ವರ್ಗಾ ವಣೆ ಮಾಡಲಾಯಿತು ಎಂದು ಅವರು ಸಮಿತಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.