ನವದೆಹಲಿ (ಪಿಟಿಐ): 2ಜಿ ತರಂಗಾಂತರ ಪರವಾನಗಿ ಹಂಚಿಕೆ ವಿಧಾನವನ್ನು ವಿರೋಧಿಸಿದ್ದರು ಎನ್ನಲಾಗಿರುವ ದೂರಸಂಪರ್ಕ ಇಲಾಖೆಯ ಇಬ್ಬರು ಮಾಜಿ ಅಧಿಕಾರಿಗಳು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಹಾಜರಾಗಲಿದ್ದಾರೆ.
2008ರ ಜನವರಿಯಲ್ಲಿ ತರಂಗಾಂತರ ಹಂಚಿಕೆಗೆ ಕೆಲವೇ ದಿನಗಳ ಮುನ್ನ ನಿವೃತ್ತರಾಗಿದ್ದ ದೂರಸಂಪರ್ಕ ಕಾರ್ಯದರ್ಶಿ ಡಿ.ಎಸ್.ಮಾಥೂರ್ ಮತ್ತು ದೂರಸಂಪರ್ಕ ಆಯೋಗದ ಮಾಜಿ ಸದಸ್ಯೆ (ಹಣಕಾಸು) ಮಂಜು ಮಾಧವನ್ ಅವರಿಗೆ 2ಜಿ ತರಂಗಾಂತರ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ನೀಡಲು ಜ.21ರಂದು ಹಾಜರಾಗುವಂತೆ ಪಿಎಸಿ ಸೂಚನೆ ನೀಡಿದೆ.
ಮಾಥೂರ್ ಮತ್ತು ಮಾಧವನ್ ಪ್ರಕರಣದ ‘ಮೌಖಿಕ ಸಾಕ್ಷಿಗಳು’ ಎನ್ನಲಾಗಿದ್ದು, ವಿವಾದಿತ 2ಜಿ ತರಂಗಾಂತರ ಹಂಚಿಕೆಯಲ್ಲಿನ ಪೂರ್ವಭಾವಿ ಬೆಳವಣಿಗೆಗಳ ಬಗ್ಗೆ ಅವರನ್ನು ಪ್ರಶ್ನಿಸುವ ನಿರೀಕ್ಷೆಯಿದೆ. 2007ರ ಡಿ.31ರಂದು ನಿವೃತ್ತರಾಗಿದ್ದ ಮಾಥೂರ್, ದೂರಸಂಪರ್ಕ ಇಲಾಖೆ ಮಾಜಿ ಸಚಿವ ಎ.ರಾಜಾ ಅವರು ತಾವು ಸಚಿವ ಸ್ಥಾನಕ್ಕೆ ಬಂದಾಗಿನಿಂದಲೂ ಭಾರಿ ಪ್ರಮಾಣದ ಪರವಾನಗಿಗಳನ್ನು ವಿತರಿಸಲು ನಿರ್ಧರಿಸಿದ್ದರು ಎಂದು ಆರೋಪಿಸಿದ್ದರು.
ಅರ್ಜಿಗಳನ್ನು ಪರಿಶೀಲಿಸುವುದಕ್ಕೆ 2007ರ ಅಕ್ಟೋಬರ್ನಲ್ಲಿ ಅಂತಿಮ ದಿನಾಂಕ ನಿಗದಿಪಡಿಸಿದ್ದರೂ ರಾಜಾ ಅದನ್ನು ತಮ್ಮ ಇಚ್ಛೆಗೆ ತಕ್ಕಂತೆ ಅದನ್ನು ಬದಲಾಯಿಸಿದ್ದರು. ಅದು 2008ರ ಜ.10ರಂದು ಅಂತಿಮಗೊಂಡರೂ ಕೆಲವೇ ಗಂಟೆಗಳ ಮೊದಲು ಪರವಾನಗಿಗಳನ್ನು ವಿತರಿಸಲಾಗಿತ್ತು ಎಂದು ಅವರು ಆರೋಪಿಸಿದ್ದರು.
2007ರಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡಿರುವ ದೂರಸಂಪರ್ಕ ಆಯೋಗದ ಹಣಕಾಸು ವಿಭಾಗದ ಸದಸ್ಯೆ ಮಂಜು ಮಾಧವನ್ ಪರವಾನಗಿಗೆ ವಿಧಿಸಿರುವ ಬೆಲೆಯನ್ನು ಪರಿಷ್ಕರಿಸುವ ಕುರಿತು ಶಿಫಾರಸಿನ ಪತ್ರವನ್ನು ಕಳುಹಿಸಿದ್ದರು. ಇಂದಿನ ಮಾರುಕಟ್ಟೆ ಸನ್ನಿವೇಶಕ್ಕೆ ಅನುಗುಣವಾಗಿ ಪರವಾನಗಿ ದರವನ್ನು ಪರಿಷ್ಕರಿಸಬೇಕು ಎಂದು ಸೂಚಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.