ADVERTISEMENT

2ಜಿ ಹಗರಣ: ಜಾಮೀನಿಗಾಗಿ ಕನಿಮೋಳಿ ಹೊಸ ಅರ್ಜಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 8:45 IST
Last Updated 24 ಅಕ್ಟೋಬರ್ 2011, 8:45 IST

ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ದೋಷಾರೋಪ ಹೊರಿಸಿದ ಎರಡು ದಿನಗಳ ಬಳಿಕ ಡಿಎಂಕೆ ಸಂಸತ್ ಸದಸ್ಯೆ ಕನಿಮೋಳಿ ಅವರು ಜಾಮೀನಿಗಾಗಿ ವಿಶೇಷ ನ್ಯಾಯಾಲಯದಲ್ಲಿ ಸೊಮವಾರ ಹೊಸದಾಗಿ ಅರ್ಜಿ ಸಲ್ಲಿಸಿದರು.

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಪುತ್ರಿ 43ರ ಹರೆಯದ ಕನಿಮೋಳಿ ಅವರು ಮೇ 20ರಂದು ಬಂಧಿತರಾದ ಬಳಿಕ ಕಳೆದ 5 ತಿಂಗಳುಗಳಿಂದ ಸೆರೆಮನೆಯಲ್ಲಿದ್ದಾರೆ.

ದೋಷಾರೋಪ ಹೊರಿಸುವ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ 22ನೇ ದಿನಾಂಕದ ಸುಪ್ರೀಂಕೋರ್ಟ್ ಆದೇಶದಂತೆ ಜಾಮೀನಿಗಾಗಿ ವಿಶೇಷ ನ್ಯಾಯಾಲಯಕ್ಕೆ ತಾವು ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕನಿಮೋಳಿ ಹೇಳಿದರು.

ಜೂನ್ 22ರ ಸುಪ್ರೀಂಕೋರ್ಟ್ ಆದೇಶದಂತೆ ಕನಿಮೋಳಿ ಮತ್ತು ಕಲೈಞ್ಞರ್ ಟಿವಿಯ ಆಡಳಿತ ನಿರ್ದೇಶಕ ಶರದ್ ಕುಮಾರ್ ಅವರು ದೋಷಾರೋಪ ಹೊರಿಸಿದ ಬಳಿಕ ಜಾಮೀನು ಸಲ್ಲಿಕೆಗಾಗಿ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಅನುಮತಿ ನೀಡಲಾಗಿದೆ ಎಂದು ಹಿರಿಯ ವಕೀಲ ಅಲ್ತಾಫ್ ಅಹಮದ್ ಅವರು ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಅವರಿಗೆ ತಿಳಿಸಿದರು.

ಜಾಮೀನು ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ ಅಹಮದ್, ನ್ಯಾಯಾಲಯವು ಕರೆದಾಗ ಹಾಜರಾಗುವಂತೆ ಖಾತರಿಗಾಗಿ ಕನಿಮೋಳಿ ಅವರಿಗೆ  ಯಾವುದೇ ಷರತ್ತುಗಳನ್ನು ವಿಧಿಸಬಹುದು ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.