ಮೊರಾದಾಬಾದ್, ಉತ್ತರ ಪ್ರದೇಶ: ಮತಾಂತರ ನಿಷೇಧ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾಗಿದ್ದ ಮುಸ್ಲಿಂ ಸಹೋದರರನ್ನು ಇಲ್ಲಿನ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ.
ಹಿಂದೂ ಯುವತಿಯೊಂದಿಗಿನ ವಿವಾಹವನ್ನು ನೋಂದಣಿ ಮಾಡಿಸುವ ಸಲುವಾಗಿ ಪತಿ ಮತ್ತು ಆತನ ಸೋದರ ಇದೇ ತಿಂಗಳ 4ರಂದು ವಿವಾಹ ನೋಂದಣಿ ಕಚೇರಿಗೆ ಹೋಗಿದ್ದರು. ಯುವತಿಯ ಕುಟುಂಬದವರು ನೀಡಿದ್ದ ದೂರಿನ ಆಧಾರದಲ್ಲಿ ಅವರನ್ನು ಬಂಧಿಸಲಾಗಿತ್ತು.
‘ರಶೀದ್ ಹಾಗೂ ಆತನ ಸಹೋದರ ಸಲೀಂ ಅವರು ತನ್ನನ್ನು ಮತಾಂತರಗೊಳ್ಳುವಂತೆ ಬಲವಂತಪಡಿಸಿಲ್ಲ ಎಂದು ಪಿಂಕಿ ಹೇಳಿಕೆ ನೀಡಿದ್ದಾರೆ. ಸಹೋದರರಿಬ್ಬರ ಮೇಲಿನ ಆರೋಪ ಸಾಬೀತುಪಡಿಸಲು ನಮ್ಮ ಬಳಿ ಯಾವುದೇ ಸಾಕ್ಷಗಳಿಲ್ಲ ಎಂದು ಕಾಂತ್ ಪೊಲೀಸ್ ಠಾಣೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಶುಕ್ರವಾರ ತಿಳಿಸಿದ್ದರು. ಇದರ ಆಧಾರದಲ್ಲಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇಬ್ಬರನ್ನು ಬಿಡುಗಡೆಗೊಳಿಸಲು ಆದೇಶಿಸಿದೆ’ ಎಂದು ಪ್ರಾಸಿಕ್ಯೂಟ್ ಅಧಿಕಾರಿ ಅಮರ್ ತಿವಾರಿ ತಿಳಿಸಿದ್ದಾರೆ.
‘ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಹೋದರರನ್ನು ಶನಿವಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ’ ಎಂದು ಮೊರಾದಾಬಾದ್ ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
‘ಸರ್ಕಾರಿ ಆಶ್ರಯ ಕೇಂದ್ರದಲ್ಲಿದ್ದ ಪಿಂಕಿಗೆ ಕಿರುಕುಳ ನೀಡಲಾಗಿದೆ. ಹೀಗಾಗಿ ಆಕೆಗೆ ಗರ್ಭಪಾತವಾಗಿದೆ’ ಎಂದು ಪಿಂಕಿ ಅವರ ಅತ್ತೆ ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.