ADVERTISEMENT

ಮಹಾರಾಷ್ಟ್ರ: ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಸಾದ ಸೇವಿಸಿದ 2000 ಜನರಿಗೆ ಅನಾರೋಗ್ಯ

ಪಿಟಿಐ
Published 7 ಫೆಬ್ರುವರಿ 2024, 9:39 IST
Last Updated 7 ಫೆಬ್ರುವರಿ 2024, 9:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನಾಂದೇಡ್‌ (ಮಹಾರಾಷ್ಟ್ರ): ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಸೇವಿಸಿದ ಸುಮಾರು 2,000 ಜನರು ಅನಾರೋಗ್ಯಕ್ಕೊಳಗಾಗಿರುವ ಘಟನೆ ಬುಧವಾರ ವರದಿಯಾಗಿದೆ.

ಲೋಹ ತಾಲ್ಲೂಕಿನ ಕೊಷ್ಟವಾಡಿ ಗ್ರಾಮದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಊರುಗಳ ಸಾವಿರಾರು ಜನರು ಭಾಗವಹಿಸಿದ್ದರು. ಅವರೆಲ್ಲ ಸಂಜೆ 5ಕ್ಕೆ ಪ್ರಸಾದ ಸೇವಿಸಿದ್ದರು.‌ ಬುಧವಾರ ನಸುಕಿನ ವೇಳೆಗೆ ಸಾಕಷ್ಟು ಜನರಿಗೆ ವಾಂತಿ–ಭೇದಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಆನಾರೋಗ್ಯಕ್ಕೊಳಗಾಗಿದ್ದ ಸುಮಾರು 150 ಜನರು ಆರಂಭದಲ್ಲಿ ಲೋಹ ಪಟ್ಟಣದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದರು. ತದನಂತರ, ಅದೇ ರೀತಿಯ ಸಮಸ್ಯೆಗಳು ಇನ್ನೂ ಹಲವರಲ್ಲಿ ಕಂಡುಬಂತು. ಹೀಗಾಗಿ ಅನಾರೋಗ್ಯಕ್ಕೆ ತುತ್ತಾದವರ ಸಂಖ್ಯೆ 870ಕ್ಕೆ ಏರಿಕೆಯಾಯಿತು. ಇವರೆಲ್ಲರೂ ಶಂಕರ್‌ರಾವ್‌ ಚೌಹಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಸೇರಿದಂತೆ ವಿವಿಧೆಡೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗತ್ಯಬಿದ್ದರೆ, ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿಯೂ ಇನ್ನಷ್ಟು ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ತನಿಖೆ ಆರಂಭಿಸಲಾಗಿದ್ದು, ಅನಾರೋಗ್ಯಕ್ಕೊಳಗಾದವರ ಮಾದರಿ ಸಂಗ್ರಹಿಸಲಾಗಿದೆ. ಪ್ರಕರಣಗಳು ವರದಿಯಾಗಿರುವ ಗ್ರಾಮಗಳಿಗೆ 5 ತಂಡಗಳನ್ನು ನಿಯೋಜಿಸಲಾಗಿದೆ. ತನಿಖೆಗಾಗಿ ಕ್ಷಿಪ್ರ ಕಾರ್ಯ ಪಡೆಯನ್ನೂ ರಚಿಸಲಾಗಿದೆ. ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.