ನವದೆಹಲಿ:ಬಸ್ ಹಳ್ಳಕ್ಕೆ ಉರುಳಿ 29 ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ವೇ ಹೆದ್ದಾರಿಯಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದೆ. ಬಸ್ನಲ್ಲಿದ್ದ 20 ಮಂದಿಯನ್ನು ರಕ್ಷಿಸಲಾಗಿದೆ. ಚಾಲಕನನ್ನು ನಿದ್ದೆಯ ಮಂಪರು ಆವರಸಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳನ್ನು ಉಲ್ಲೇಖಿಸಿ ಎನ್ಡಿಟಿವಿ ಜಾಲತಾಣವರದಿ ಮಾಡಿದೆ.
ಯಮುನಾ ಎಕ್ಸ್ಪ್ರೆಸ್ವೇ ಮಾರ್ಗದಲ್ಲಿ ಉತ್ತರ ಪ್ರದೇಶ ರಾಜಧಾನಿ ಲಖನೌನಿಂದ ದೆಹಲಿಗೆ ಹೋಗುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಹಳ್ಳಕ್ಕೆ ಉರುಳಿಬಿತ್ತು. 6 ಮಾರ್ಗಗಳ ಯಮುನಾ ಎಕ್ಸ್ಪ್ರೆಸ್ವೇ ನೊಯ್ಡಾದಿಂದ ಆಗ್ರಾ ಸಂಪರ್ಕಿಸುತ್ತದೆ.
‘ಸ್ಲೀಪರ್ ಕೋಚ್ ಬಸ್ 15 ಅಡಿ ಆಳದಹಳ್ಳಕ್ಕೆ ಉರುಳಿದೆ. ಈವರೆಗೆ 20 ಪ್ರಯಾಣಿಕರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ರಕ್ಷಣಾ ಕಾರ್ಯಗಳು ಪ್ರಗತಿಯಲ್ಲಿವೆ’ ಎಂದು ಉತ್ತರ ಪ್ರದೇಶ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಅಪಘಾತಕ್ಕೀಡಾದ ಬಸ್ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅವಧ್ ಡಿಪೊಗೆ ಸೇರಿದ್ದಾಗಿದೆ. ಡಬಲ್ ಡೆಕರ್ ಬಸ್ ಹಳ್ಳಕ್ಕೆ ಉರುಳಿದಾಗ ಒಟ್ಟು 50 ಮಂದಿ ಪ್ರಯಾಣಿಕರಿದ್ದರು. ಸಾರಿಗೆ ಸಂಸ್ಥೆಯು ಮೃತರಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.