ADVERTISEMENT

ಕೂದಲಿಗೆ ಬಿಳಿ ಬಣ್ಣ ಹಚ್ಚಿಕೊಂಡು ಶಬರಿಮಲೆ ದೇವಾಲಯ ಪ್ರವೇಶಿಸಿದ ದಲಿತ ಮಹಿಳೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 3:49 IST
Last Updated 10 ಜನವರಿ 2019, 3:49 IST
ಎಸ್‌.ಪಿ. ಮಂಜು
ಎಸ್‌.ಪಿ. ಮಂಜು   

ಶಬರಿಮಲೆ/ತಿರುವನಂತಪುರ:ಕನಕದುರ್ಗಾ ಮತ್ತು ಬಿಂದು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶ ಮಾಡಿದ ಬೆನ್ನಲೇ 39ರ ಹರೆಯದ ದಲಿತ ಮಹಿಳೆಯೊಬ್ಬರು ಜನವರಿ 8 ರಂದು ದೇವಾಲಯ ಪ್ರವೇಶ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಹಾಗೂ ಕೇರಳ ದಲಿತ ಮಹಿಳಾ ವೇದಿಕೆಯ ನಾಯಕಿ ಎಸ್‌.ಪಿ. ಮಂಜು(39) ಪೊಲೀಸರ ನೆರವು ಹಾಗೂ ಅಯ್ಯಪ್ಪ ಭಕ್ತರ ವಿರೋಧ ಇಲ್ಲದೆ ದೇವಾಲಯ ಪ್ರವೇಶ ಮಾಡಿದ್ದಾರೆ. ರೆನಾಸೈನ್ಸ್‌ ಕೇರಳ ಟು ಶಬರಿಮಲೆ ಎಂಬ ಫೇಸ್‌ ಗ್ರೂಪ್‌ ಮಂಜು ದೇವಾಲಯ ಪ್ರವೇಶದ ವಿಡಿಯೊಗಳನ್ನು ಪ್ರಕಟಿಸಿದೆ.

ಅಯ್ಯಪ್ಪ ಭಕ್ತರ ದಾಳಿಯನ್ನು ತಪ್ಪಿಸುವ ಸಲುವಾಗಿ ವಯಸ್ಸಾದವರಂತೆ ಕಾಣಲು ಮಂಜು ಕೂದಲಿಗೆ ಬಿಳಿ ಬಣ್ಣ ಬಳಿದುಕೊಂಡಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು.

ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಮಂಜು ದೇವಾಲಯ ಪ್ರವೇಶಿಸಲು ಎರಡು ಸಲ ಪ್ರಯತ್ನ ಮಾಡಿದ್ದರು. ಭಕ್ತರ ವಿರೋಧ ಹಾಗೂ ಭದ್ರತೆ ಕಾರಣಗಳಿಂದ ಅವರ ಯತ್ನ ಸಫಲವಾಗಿರಲಿಲ್ಲ. ಮಂಗಳವಾರ (ಜನವರಿ 8)ದಂದು 18 ಮೆಟ್ಟಿಲುಗಳನ್ನು ಹತ್ತುವ ಮೂಲಕ ಮಂಜು ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ.

ಮಂಜು ಕೊಲ್ಲಂ ಜಿಲ್ಲೆಯ ಚತ್ತನೂರಿನವರು. ಮಂಗಳವಾರ ಬೆಳಗ್ಗೆ 4 ಗಂಟೆ ಪಂಬ ತಲುಪಿದ ಅವರು ಇಬ್ಬರು ಪರಿಚಿತ ಯುವಕರ ಜೊತೆಯಲ್ಲಿ ಸಾಮಾನ್ಯ ಭಕ್ತರಂತೆ ಶಬರಿಮಲೆಯನ್ನು ಹತ್ತಿದ್ದಾರೆ. ಈ ವೇಳೆ ಭಕ್ತರಿಂದ ಯಾವ ವಿರೋಧವು ವ್ಯಕ್ತವಾಗಲಿಲ್ಲ ಎಂದು ಮಂಜು ಹೇಳಿಕೊಂಡಿದ್ದಾರೆ. ಬೆಟ್ಟ ಹತ್ತಲು ಸಹಕರಿಸಿದ್ದ ಯುವಕರೇ ನಾನು ದೇವಾಲಯ ಪ್ರವೇಶ ಮಾಡುವುದನ್ನು ವಿಡಿಯೊ ಮಾಡಿದ್ದಾರೆ. ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ ಎಂದು ಮಂಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.