ಪಟ್ನಾ, ಬಿಹಾರ್ (ಪಿಟಿಐ): ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸಂಯುಕ್ತ ಜನತಾ ದಳದ (ಜೆಡಿಯು) ನಾಲ್ವರು ಬಂಡಾಯ ಶಾಸಕರನ್ನು ವಿಧಾನಸಭೆ ಸದಸ್ಯತ್ವದಿಂದ ಶನಿವಾರ ಅನರ್ಹಗೊಳಿಸಲಾಗಿದೆ.
ಈ ನಾಲ್ವರು ಇತ್ತೀಚೆಗೆ ರಾಜ್ಯಸಭೆಯ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು ಎನ್ನಲಾಗಿದೆ.
ವಿಧಾನಸಭೆ ಸ್ಪೀಕರ್ ಉದಯ್ ನರೇನ್ ಚೌಧರಿ ಅವರು ಈ ಸಂಬಂಧಿತ ಆದೇಶಗಳನ್ನು ಸಂಬಂಧಿತ ಶಾಸಕರಿಗೆ ನೀಡಿದ್ದಾರೆ ಎಂದು ವಿಧಾನಸಭಾಧ್ಯಕ್ಷರ ಕೊಠಡಿಯಿಂದ ಹೊರ ಬಂದ, ಅನರ್ಹಗೊಂಡಿರುವ ಶಾಸಕರಲ್ಲಿ ಒಬ್ಬರಾದ ಜ್ಞಾನೇಂದ್ರ ಸಿಂಗ್ ಜ್ಞಾನೂ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬರ್ಹ್ ಕ್ಷೇತ್ರದ ಜ್ಞಾನೂ, ಛತ್ತಾಪುರ ಕ್ಷೇತ್ರದ ನೀರಜ್ ಸಿಂಗ್ ಬಬ್ಲೂ, ಮಹುವಾ ಕ್ಷೇತ್ರದ ರವೀಂದ್ರ ರೈ ಹಾಗೂ ಘೋಷಿ ಕ್ಷೇತ್ರದ ರಾಹುಲ್ ಶರ್ಮಾ ಅನರ್ಹಗೊಂಡ ನಾಲ್ವರು ಶಾಸಕರು.
‘ನಮ್ಮ ನಾಲ್ವರಿಗೂ ಮಾಜಿ ಶಾಸಕರ ಸ್ಥಾನಮಾನವನ್ನೂ ನೀಡುವುದಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ’ ಎಂದು ಜ್ಞಾನೂ ಹಾಗೂ ಬಬ್ಲೂ ಅವರು ತಿಳಿಸಿದ್ದಾರೆ.
ಅರ್ನಹತೆ ನಿರ್ಧಾರವನ್ನು ‘ಅಸಾಂವಿಧಾನಿಕ’ ಎಂದು ಟೀಕಿಸಿರುವ ನಾಲ್ವರೂ, ಪಟ್ನಾ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.