ನವದೆಹಲಿ: ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾಗಿರುವ 57 ಸದಸ್ಯರ ಪೈಕಿ 23 ಮಂದಿ ಮೇಲೆ (ಶೇ 40ರಷ್ಟು ಸದಸ್ಯರು) ಕ್ರಿಮಿನಲ್ ಪ್ರಕರಣಗಳಿವೆ. ಇವರಲ್ಲಿ ಬಿಜೆಪಿಯ ಒಂಬತ್ತು, ಕಾಂಗ್ರೆಸ್ನ ನಾಲ್ವರು ಸದಸ್ಯರು ಇದ್ದಾರೆ.
ಅಭ್ಯರ್ಥಿಗಳು ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ಆಧರಿಸಿ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್) ಈ ಬಗ್ಗೆ ವರದಿ ನೀಡಿದೆ. ಈ ಸದಸ್ಯರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದನ್ನು ಘೋಷಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಕ್ರಿಮಿನಲ್ ಪ್ರಕರಣಗಳಿರುವ 23 ಸದಸ್ಯರಲ್ಲಿ ಉತ್ತರಪ್ರದೇಶದಿಂದ ಆರು ಮಂದಿ ಆಯ್ಕೆಯಾಗಿದ್ದಾರೆ. ಉಳಿದಂತೆ ಮಹಾರಾಷ್ಟ್ರ, ಬಿಹಾರದಿಂದ ಆಯ್ಕೆಯಾಗಿರುವ ತಲಾ ನಾಲ್ವರು, ತಮಿಳುನಾಡಿನ ಮೂವರು, ತೆಲಂಗಾಣದ ಇಬ್ಬರು, ಆಂಧ್ರಪ್ರದೇಶ, ಛತ್ತೀಸಗಡ, ರಾಜಸ್ಥಾನ, ಹರಿಯಾಣದ ತಲಾ ಒಬ್ಬರು ಸದಸ್ಯರು ಇದ್ದಾರೆ.
ಟಿಆರ್ಎಸ್ನ ಇಬ್ಬರು, ಆರ್ಜೆಡಿಯ ಇಬ್ಬರು, ವೈಎಸ್ಆರ್ಸಿಪಿ, ಡಿಎಂಕೆ, ಎಐಎಡಿಎಂಕೆ, ಎಸ್ಪಿ, ಶಿವಸೇನೆಯ ತಲಾ ಒಬ್ಬರು, ಒಬ್ಬ ಪಕ್ಷೇತರ ಅಭ್ಯರ್ಥಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದನ್ನು ಘೋಷಿಸಿಕೊಂಡಿದ್ದಾರೆ. ಒಟ್ಟಾರೆ 12 ಮಂದಿ ಸದಸ್ಯರು ತಮ್ಮ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.
ಕೋಟ್ಯಧಿಪತಿಗಳು: ಹೊಸದಾಗಿ ಆಯ್ಕೆಯಾದ 57 ಸದಸ್ಯರಲ್ಲಿ 53 ಮಂದಿ ಕೋಟ್ಯಧಿಪತಿಗಳು. ಇವರಲ್ಲಿ ಟಿಎಸ್ಆರ್ ಪಕ್ಷದ ಬಂಡಿ ಪಾರ್ಥ ಅವರು ಸಿರಿವಂತರಾಗಿದ್ದು, ತಮ್ಮ ಒಟ್ಟು ಆಸ್ತಿಯ ಮೌಲ್ಯ ₹ 1,500 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.