ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವ್ಯಾಪ್ತಿಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಆರು ಉಗ್ರರನ್ನು ಭದ್ರತಾ ಪಡೆ ಶುಕ್ರವಾರ ಹೊಡೆದುರುಳಿಸಿದೆ.
ಆರು ಉಗ್ರರನ್ನು ಬಲಿ ಪಡೆಯುವುದರೊಂದಿಗೆ 48 ಗಂಟೆಗಳಲ್ಲಿ ಭಾರತೀಯ ಸೇನೆಯು ಉಗ್ರರ ಒಳನುಸುಳುವಿಕೆಯ ಐದು ಯತ್ನಗಳನ್ನು ವಿಫಲಗೊಳಿಸಿದೆ.
ಬುಧವಾರದಿಂದೀಚೆಗೆ ಉಗ್ರರ ಒಳ ನುಸುಳುವಿಕೆಯ ಐದು ಯತ್ನಗಳನ್ನು ವಿಫಗೊಳಿಸಿರುವ ಭದ್ರತಾಪಡೆ ಸಿಬ್ಬಂದಿ, ಒಟ್ಟು 12 ಉಗ್ರರನ್ನು ಹೊಡೆದುರುಳಿಸಿದ್ದಾರೆ.
‘48 ತಾಸುಗಳಲ್ಲಿ ಗುರೇಝ್, ಮಾಚಿಲ್, ನೌಗಾಮ್ ಮತ್ತು ಉರಿ ವಲಯಗಳಲ್ಲಿ ಒಳ ನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸಲಾಗಿದೆ. ಸೇನೆ ಈ ವರೆಗೆ ಒಟ್ಟು 12 ಉಗ್ರರನ್ನು ಬಲಿ ಪಡೆದಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಕುಪ್ವಾರ ಜಿಲ್ಲೆಯ ನೌಗಾಮ್ ವಲಯದಲ್ಲಿ ಮೂವರು, ಇದೇ ವಲಯದ ಮಾಚಿಲ್ ವಲಯದಲ್ಲಿ ನಾಲ್ವರು ಉಗ್ರರನ್ನು ಬುಧವಾರ ಮತ್ತು ಗುರುವಾರ ಹೊಡೆದುರುಳಿಸಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಉರಿ ವಲಯದಲ್ಲಿ ಭಾರತದ ಗಡಿ ಪ್ರದೇಶದೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಶಸ್ತ್ರಸಜ್ಜಿತ ಉಗ್ರರ ಗುಂಪಿನ ಚನವಲನವನ್ನು ಸೇನೆ ಗುರುವಾರ ರಾತ್ರಿ ಗಮನಿಸಿದೆ. ಬಳಿಕ, ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಉಗ್ರರು ಶುಕ್ರವಾರ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿ ಆರು ಉಗ್ರರನ್ನು ಹೊಡೆದುರುಳಿಸಿದೆ ಎಂದು ಸೇನೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.