ಕೋರ್ಟ್
ಭುವನೇಶ್ವರ: ಒಡಿಶಾದ ಕೆಐಐಟಿಯ ಹಾಸ್ಟೆಲ್ನಿಂದ ನೇಪಾಳಿ ವಿದ್ಯಾರ್ಥಿಗಳನ್ನು ಬಲವಂತವಾಗಿ ಹೊರಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಐವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ.
ಕಾಲೇಜಿನ ಎಚ್ಆರ್ ವಿಭಾಗದ ಮುಖ್ಯಸ್ಥ ಸಿಬಾನಂದ ಮಿಶ್ರಾ (59), ಆಡಳಿತ ಮಂಡಳಿ ನಿರ್ದೇಶಕ ಪ್ರತಾಪ್ ಕುಮಾರ್ ಚಾಮುಪತಿ (51), ಹಾಸ್ಟೆಲ್ ನಿರ್ದೇಶಕ ಸುಧೀರ್ ಕುಮಾರ್ ರಥ್ (59) ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ರಮಾಕಾಂತ ನಾಯಕ್ (45) ಮತ್ತು ಜೋಗೇಂದ್ರ ಬೆಹೆರಾ (25) ಇವರಿಗೆ ಜಾಮೀನು ನೀಡಲಾಗಿದೆ.
ನೇಪಾಳದ ವಿದ್ಯಾರ್ಥಿನಿ ಪ್ರಕೃತಿ ಲಮ್ಸಾಲ್ (20) ಆತ್ಮಹತ್ಯೆ ನಂತರ ಇವರ ಬಂಧನವಾಗಿತ್ತು. ಮಂಗಳವಾರ ಇವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಇಲ್ಲಿನ ಏಮ್ಸ್ನಲ್ಲಿ ಮಂಗಳವಾರ ಮರಣೋತ್ತರ ಪರೀಕ್ಷೆಯ ನಂತರ ವಿದ್ಯಾರ್ಥಿನಿಯ ಶವವನ್ನು ಆಕೆಯ ತಂದೆ ಸುನೀಲ್ ಲಮ್ಸಾಲ್ಗೆ ಒಡಿಶಾ ಪೊಲೀಸರು ಹಸ್ತಾಂತರಿಸಿದರು. ಮಗಳ ಶವವನ್ನು ನೇಪಾಳಕ್ಕೆ ಕೊಂಡೊಯ್ಯುವುದಾಗಿ ಸುನೀಲ್ ತಿಳಿಸಿದ್ದರು.
ಒಡಿಶಾ ಸರ್ಕಾರವು ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ನೇತೃತ್ವದಲ್ಲಿ, ಉನ್ನತ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಒಳಗೊಂಡ ಮೂವರು ಸದಸ್ಯರ ಉನ್ನತ ಮಟ್ಟದ ಸತ್ಯಶೋಧನಾ ತಂಡವನ್ನು ರಚಿಸಿದೆ.
ವಿದ್ಯಾರ್ಥಿನಿಯ ಆತ್ಮಹತ್ಯೆ ಸಂಬಂಧ ಹಾಗೂ ಹಾಸ್ಟೆಲ್ನಿಂದ ವಿದ್ಯಾರ್ಥಿಗಳನ್ನು ಹೊರ ಹಾಕಿದ್ದರ ಕುರಿತು ಎರಡು ದೂರುಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣ ಒಡಿಶಾ ವಿಧಾನಸಭೆಯಲ್ಲಿ ಪ್ರತಿಧ್ವನಿಸುವ ಜತೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.