ನವದೆಹಲಿ: ಚಳಿಗಾಲದ ರಜೆ ನಂತರ ಜನವರಿ 4ರಂದು ಸುಪ್ರೀಂಕೋರ್ಟ್ ಪುನರಾರಂಭವಾಗಲಿದ್ದು, ಅಯೋಧ್ಯೆಯ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ವಿವಾದ, ಆಧಾರ್ ಕಾರ್ಡ್ನ ಸಿಂಧುತ್ವ ಸೇರಿದಂತೆ ಪ್ರಮುಖ ಪ್ರಕರಣಗಳ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಕರ್ನಾಟಕ, ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದದ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ಬಗ್ಗೆ ಮಹತ್ವದ ವಿಚಾರಣೆ ನಡೆಯುವ ನಿರೀಕ್ಷೆ ಇದೆ.
ಅಲ್ಲದೆ, ದೆಹಲಿ ಸರ್ಕಾರ ಮತ್ತು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ನಡುವಿನ ಅಧಿಕಾರ ಹಂಚಿಕೆ, ನೇಮಕಾತಿ ಮುಂತಾದ ಅಧಿಕಾರ ವ್ಯಾಪ್ತಿ ಕುರಿತ ಸ್ಪಷ್ಟೀಕರಣ ಕೋರಿ ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ನಡೆಯಲಿದೆ. ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು, ಎತ್ತಿನ ಗಾಡಿ ಸ್ಪರ್ಧೆ ಸೇರಿದಂತೆ ಎತ್ತು ಮತ್ತು ಕೋಣಗಳನ್ನು ಬಳಸಿಕೊಂಡು ನಡೆಸುವ ಇತರ ಕ್ರೀಡೆಗಳಿಗೆ ಸಂವಿಧಾನದ ವಿಧಿ 29(1)ರ ಸಾಂಸ್ಕೃತಿಕ ಹಕ್ಕಿನ ಅಡಿ ಅನುಮತಿ ನೀಡುವುದರ ಬಗ್ಗೆಯೂ ವಿಚಾರಣೆ ನಡೆಯಲಿದೆ.
ಇದರ ಜತೆಗೆ, ಕೇರಳದ ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ಹಾದಿಯಾ ಪ್ರಕರಣ ಕುರಿತು ವಿಚಾರಣೆ ನಡೆಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.