ರಾಂಚಿ/ಪಟ್ನಾ: ಬಹುಕೋಟಿ ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ಶಿಕ್ಷೆ ಪ್ರಕಟಿಸುವುದನ್ನು ಸಿಬಿಐ ವಿಶೇಷ ನ್ಯಾಯಾಲಯ ಗುರುವಾರಕ್ಕೆ ಮುಂದೂಡಿದೆ.
ಪೂರ್ವನಿಗದಿಯಂತೆ ಬುಧವಾರ ಶಿಕ್ಷೆ ಪ್ರಕಟಿಸಬೇಕಿತ್ತು. ವಕೀಲ ಬಿಂದೇಶ್ವರಿ ಪ್ರಸಾದ್ ಅಕಾಲಿಕವಾಗಿ ನಿಧನ ಹೊಂದಿದ ಕಾರಣ ಸಿಬಿಐ ನ್ಯಾಯಾಧೀಶ ಶಿವಪಾಲ್ ಸಿಂಗ್ ಶಿಕ್ಷೆ ಪ್ರಕಟಿಸುವುದನ್ನು ಮುಂದೂಡಿದರು.
ಲಾಲು ಪ್ರಸಾದ್ ಮತ್ತು ಇತರ 15 ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ಡಿಸೆಂಬರ್ 23ರಂದು ತೀರ್ಪು ನೀಡಿತ್ತು. ಸಾಕ್ಷ್ಯಾಧಾರಗಳಿಲ್ಲದ ಕಾರಣ ಬಿಹಾರದ ಮಾಜಿ ಮುಖ್ಯಮಂತ್ರಿ ಡಾ.ಜಗನ್ನಾಥ್ ಮಿಶ್ರಾ ಮತ್ತು ಇತರ ಐವರನ್ನು ಖುಲಾಸೆಗೊಳಿಸಿತ್ತು.
‘ಮೂರು ಅಂಶಗಳ ಆಧಾರದ ಮೇಲೆ ಲಾಲು ಪ್ರಸಾದ್ ಮತ್ತು ಇತರರಿಗೆ ಕಡಿಮೆ ಶಿಕ್ಷೆ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದೇವೆ. ಮೊದಲನೇಯದಾಗಿ ಇದು 21 ವರ್ಷಗಳ ಹಳೆಯ ಪ್ರಕರಣ. ಎರಡನೇಯದಾಗಿ ಲಾಲು ಅವರಿಗೆ ಈಗ 70 ವರ್ಷ. ಮೂರನೇಯದಾಗಿ ಅವರು 2014ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ’ ಎಂದು ಲಾಲು ಪರ ವಕೀಲ ಪ್ರಭಾತ್ ಕುಮಾರ್ ಬುಧವಾರ ರಾಂಚಿಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.