ADVERTISEMENT

ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಒಡಿಶಾ, ಪಶ್ಚಿಮ ಬಂಗಾಳ

ಏಜೆನ್ಸೀಸ್
Published 5 ಜನವರಿ 2018, 6:59 IST
Last Updated 5 ಜನವರಿ 2018, 6:59 IST
ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಒಡಿಶಾ, ಪಶ್ಚಿಮ ಬಂಗಾಳ
ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಒಡಿಶಾ, ಪಶ್ಚಿಮ ಬಂಗಾಳ   

ನವದೆಹಲಿ: ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ನೀತಿ ಆಯೋಗದ ವತಿಯಿಂದ ಆಯೋಜನೆಗೊಂಡಿದ್ದ ಸಭೆಯನ್ನು ಬಹಿಷ್ಕರಿಸಲು ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳು ನಿರ್ಧರಿಸಿವೆ.

ಜನವರಿ 5ರಂದು ನಡೆಯಲಿರುವ ಸಭೆಯಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಯೋಜನೆ ಹಾಗೂ ಬಜೆಟ್‌ ಕುರಿತು ಚರ್ಚೆ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ದೇಶದ ಸುಮಾರು ನೂರು ಜಿಲ್ಲೆಗಳ ಆಡಳಿತಾಧಿಕಾರಿಗಳು ಪಾಲ್ಗೊಂಡು ಮೋದಿ ಜತೆ ಚರ್ಚೆ ನಡೆಸಲಿದ್ದಾರೆ.

ADVERTISEMENT

‘ಈ ಸಭೆಯು ಪ್ರಧಾನಿ ಮೋದಿ ಅವರ 2022ರ ವೇಳೆಗೆ ನವಭಾರತ ನಿರ್ಮಾಣ ಮಾಡುವ ದೃಷ್ಟಿಕೋನಕ್ಕೆ ಅನುಗುಣವಾಗಿ ನಡೆಯಲಿದೆ. ಕೇಂದ್ರ ಸರ್ಕಾರವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕ್ಷಿಪ್ರ ಅಭಿವೃದ್ಧಿ ಸಾಧಿಸಲು ವಿಫಲವಾಗುತ್ತಿರುವ ಜಿಲ್ಲೆಗಳಿಗೆ ಉಪಕ್ರಮಗಳನ್ನು ಆರಂಭಿಸಲಿದೆ’ ಎಂದು ಸರ್ಕಾರದ ಪ್ರಕಟಣೆಯೊಂದು ತಿಳಿಸಿದೆ.

ಕೇಂದ್ರ ಸರ್ಕಾರವು ವಿವಿಧ ಜಿಲ್ಲೆಗಳ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವುದರ ಕುರಿತು ಅಸಮಾಧಾನ ಹೊಂದಿರುವುದರಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ಈ ಸಭೆಯಿಂದ ಹಿಂದೆ ಸರಿದಿವೆ. ಈ ರಾಜ್ಯ ಸರ್ಕಾರಗಳು ಯಾವುದೇ ಸಮಾಲೋಚನೆಯನ್ನು ನಡೆಸದೆ ಈ ತೀರ್ಮಾನಕ್ಕೆ ಬಂದಿವೆ ಎನ್ನಲಾಗಿದೆ.

ಒಡಿಸ್ಸಾ ಸರ್ಕಾರದೊಡನೆ ಚರ್ಚಿಸದೆ ಅಲ್ಲಿನ ಕಲಹಂಡಿ, ಕಂಧಮಲ್‌, ರಾಯಗಡ, ಗಜಪತಿ, ಮಲ್ಕಂಗಿರಿ, ಕೊರಪುತ್‌, ಬಲಂಗಿರ್‌ ಹಾಗೂ ಧೆಂಕನಲ್‌ ಜಿಲ್ಲೆಗಳನ್ನು ತೀರ ಹಿಂದುಳಿದ ಜಿಲ್ಲೆಗಳು ಎಂದು ನೀತಿ ಆಯೋಗ ಗುರುತಿಸಿದೆ. ಅದರಂತೆ ಇಂತಹ ಜಿಲ್ಲೆಗಳಿಗೆ ಮೇಲ್ವಿಚಾರಕರನ್ನು ಸ್ವತಃ ನೇಮಿಸಿದೆ.

ಹೀಗಾಗಿ ಒಡಿಶಾ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮಾಧಾನಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.