ADVERTISEMENT

ಕಮಲ್‌ ಹಾಸನ್‌ ಫೋಟೊಗಳಿಗೆ ಬೆಂಕಿ ಇಟ್ಟ ದಿನಕರನ್‌ ಪರ ವಕೀಲರು

ಏಜೆನ್ಸೀಸ್
Published 6 ಜನವರಿ 2018, 12:17 IST
Last Updated 6 ಜನವರಿ 2018, 12:17 IST
ಕಮಲ್‌ ಹಾಸನ್‌ ಫೋಟೊಗಳಿಗೆ ಬೆಂಕಿ ಇಟ್ಟ ದಿನಕರನ್‌ ಪರ ವಕೀಲರು
ಕಮಲ್‌ ಹಾಸನ್‌ ಫೋಟೊಗಳಿಗೆ ಬೆಂಕಿ ಇಟ್ಟ ದಿನಕರನ್‌ ಪರ ವಕೀಲರು   

ಕೊಯಂಬತ್ತೂರು: ಎಐಡಿಎಂಕೆ ಪಕ್ಷದ ಬಂಡಾಯ ನಾಯಕ ಹಾಗೂ ತಮಿಳುನಾಡು ವಿಧಾನಸಭೆಯ ನೂತನ ಶಾಸಕ ಟಿ.ಟಿ.ವಿ ದಿನಕರನ್‌ ಪರ ವಕೀಲರು ನಟ ಕಮಲ್‌ ಹಾಸನ್‌ ಅವರ ಕೆಲವು ಫೋಟೊಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇಲ್ಲಿನ ಜಿಲ್ಲಾ ನ್ಯಾಯಾಲಯದ ಎದುರು ಸೇರಿದ್ದ ಇಬ್ಬರು ವಕೀಲರು 2017ರ ಡಿಸೆಂಬರ್‌ 21ರಂದು ನಡೆದ ಆರ್‌.ಕೆ.ನಗರ ವಿಧಾನಸಭೆ ಉಪಚುನಾವಣೆ ಕುರಿತು ಕಮಲ್‌ ಹಾಸನ್‌ ನೀಡಿದ್ದ ಹೇಳಿಕೆ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆನಂದ್‌ ವಿಕಟನ್‌ ನಿಯತಕಾಲಿಕೆಗೆ ಇತ್ತೀಚೆಗೆ ಸಂದರ್ಶನ ನೀಡಿದ್ದ ಕಮಲ್‌ ಹಾಸನ್‌, ಆರ್‌.ಕೆ.ನಗರ ವಿಧಾನಸಭೆ ಉಪಚುನಾವಣೆಯಲ್ಲಿ ದಿನಕರನ್‌ ಅವರು ಗೆಲುವು ಸಾಧಿಸಿರುವುದಕ್ಕೆ ಹಣಬಲ ಕಾರಣ ಎಂದು ಹೇಳಿದ್ದರು.

ADVERTISEMENT

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ದಿನಕರನ್‌ ನನ್ನ ಗೆಲುವನ್ನು ಸಹಿಸಲಾಗದೆ ಕಮಲ್‌ ಈ ರೀತಿ ಆರೋಪಿಸುತ್ತಿದ್ದಾರೆ ಎಂದಿದ್ದರು.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಮರಣದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರನ್‌ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ದಾಖಲೆ ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.