ಚೆನ್ನೈ/ಕೊಯಮತ್ತೂರು: ಎಐಎಡಿಎಂಕೆ ಬಂಡಾಯ ನಾಯಕ ಹಾಗೂ ಶಾಸಕ ಟಿಟಿವಿ ದಿನಕರನ್ ಬೆಂಬಲಿಗ ವಕೀಲರು ಶನಿವಾರ ಕೊಯಮತ್ತೂರಿನ ಜಿಲ್ಲಾ ನ್ಯಾಯಾಲಯದ ಎದುರು ನಟ ಕಮಲ್ ಹಾಸನ್ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದಿನಕರನ್ ಹಣಶಕ್ತಿಯಿಂದ ಆರ್.ಕೆ. ನಗರ ಉಪ ಚುನಾವಣೆಯಲ್ಲಿ ಗೆದ್ದಿದ್ದಾರೆ’ ಎಂದು ಕಮಲ್ ಹಾಸನ್ ತಮಿಳು ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಆರೋಪಿಸಿದ್ದರು. ಇದು ದಿನಕರನ್ ಬೆಂಬಲಿಗ ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ.
‘ರಜನಿ ರಾಜಕೀಯ ಪಕ್ಷ: ಇನ್ನೂ ವಕ್ತಾರರು ಇಲ್ಲ’
ರಜನಿಕಾಂತ್ ಅವರ ರಾಜಕೀಯ ಪಕ್ಷದ ಕುರಿತು ಸುದ್ದಿ ವಾಹಿನಿಗಳಲ್ಲಿ ಚರ್ಚಿಸಲು ಇಲ್ಲವೇ ಹೇಳಿಕೆ ನೀಡಲು ಯಾರಿಗೂ ಅಧಿಕಾರ ನೀಡಿಲ್ಲ ಎಂದು ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಸಂಘ ಸ್ಪಷ್ಟಪಡಿಸಿದೆ.
ರಜನಿಕಾಂತ್ ಅವರ ರಾಜಕೀಯ ಪಕ್ಷ ಘೋಷಣೆಯ ನಂತರ ನಿಲುವುಗಳ ಕುರಿತು ಅಭಿಮಾನಿಗಳ ಸಂಘ ಸ್ವಯಂ ಹೇಳಿಕೆ ಬಿಡುಗಡೆ ಮಾಡುವುದಾಗಿ ಹೇಳಿದೆ.
ಸುದ್ದಿ ವಾಹಿನಿ ಚರ್ಚೆಗಳಲ್ಲಿ ಕೆಲವರು ವ್ಯಕ್ತಪಡಿಸುತ್ತಿರುವ ಅನಿಸಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು, ಅಧಿಕೃತ ಹೇಳಿಕೆಗಳಲ್ಲ ಎಂದು ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.