ನವದೆಹಲಿ: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಗಳು ಸಾರಾಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ 32 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಬಂಧಿತನನ್ನು ದೇಬ್ಕುಮಾರ್ ಮೈಥಿ ಎಂದು ಗುರುತಿಸಲಾಗಿದೆ. ಈತ ಸಚಿನ್ ಮನೆಗೆ ಸುಮಾರು 20 ಬಾರಿ ಕರೆಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಸಾರಾಳನ್ನು ಅಪಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ತಿಳಿದುಬಂದಿದೆ.
‘ಟಿ.ವಿ.ಯಲ್ಲಿ ಪಂದ್ಯವೊಂದನ್ನು ವೀಕ್ಷಿಸುವಾಗ ಪೆವಿಲಿಯನ್ನಲ್ಲಿದ್ದ ಸಾರಾಳನ್ನು ನೋಡಿ, ಪ್ರೀತಿ ಮಾಡಲು ಆರಂಭಿಸಿದೆ. ಅವಳನ್ನು ಮದುವೆಯಾಗಲು ಬಯಸಿದೆ. ಅವಳನ್ನು ಒಮ್ಮೆಯೂ ಪ್ರತ್ಯಕ್ಷವಾಗಿ ನೋಡಿಲ್ಲ. ತೆಂಡೂಲ್ಕರ್ ಮನೆಗೆ ಸುಮಾರು 20 ಬಾರಿ ಕರೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
ವಿಚಾರಣೆಗಾಗಿ ಆರೋಪಿಯನ್ನು ಹಾಲ್ದಿಯಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಮುಂಬೈಗೂ ಕರೆದೊಯ್ಯಲಾಗುತ್ತಿದೆ.
ಆರೋಪಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಕಾಲೇಜಿನ ಓದನ್ನು ಅರ್ಧಕ್ಕೆ ಬಿಟ್ಟಿರುವ ಆತ ನಿರುದ್ಯೋಗಿಯಾಗಿದ್ದ ಎಂದು ದೇಬ್ಕುಮಾರ್ನ ಕುಟುಂಬ ಸದಸ್ಯರು ತಿಳಿಸಿದ್ದಾರೆ.
‘ಮನೆಯಲ್ಲಿಯೂ ಆತ ಪೋಷಕರನ್ನು ಪೀಡಿಸುತ್ತಿದ್ದ. ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿರುವ ಆರೋಪಿ, ಕಳೆದ ಎಂಟು ವರ್ಷಗಳಿಂದ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಅವರು ಹೇಳಿಕೆ ನೀಡಿದ್ದಾರೆ.
ಆರೋಪಿಯ ಮನೆಯಲ್ಲಿ ಪೊಲೀಸರು ಡೈರಿಯೊಂದನ್ನು ಪರಿಶೀಲಿಸಿದಾಗ, ಅದರಲ್ಲಿ ‘ಸಚಿನ್ ಮಗಳು ತನ್ನ ಹೆಂಡತಿ’ ಎಂಬ ಬರಹ ಕಂಡಿದೆ. ಸಚಿನ್ ಮನೆಯ ಟೆಲಿಪೋನ್ ನಂಬರ್ ಆರೋಪಿಗೆ ಹೇಗೆ ಸಿಕ್ಕಿತು ಎಂದು ತಿಳಿಯಲು ವಿಚಾರಣೆ ನಡೆಯುತ್ತಿದೆ.
ಆರೋಪಿ ನಿಜವಾಗಿಯೂ ಮಾನಸಿಕ ಅಸ್ವಸ್ಥನೇ ಎಂಬುದನ್ನು ತಿಳಿಯಲು ವೈದ್ಯಕೀಯ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಅನುಚಿತ ಕರೆಗಳು ಬಂದಾಗ ಸಾರಾ ತೆಂಡೂಲ್ಕರ್ ಬಾಂದ್ರಾ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ಕಾರ್ಯಪ್ರವೃತ್ತರಾಗಿ ಕರೆಗಳು ಬಂದ ಪ್ರದೇಶವನ್ನು ಗುರುತಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ತನ್ನನ್ನು ಮದುವೆಯಾಗಲು ಆರೋಪಿ ಫೋನ್ನಲ್ಲಿಯೇ ಸಾರಾಳನ್ನು ಕೇಳಿಕೊಂಡಿದ್ದನಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.