ಅಲೀಗಡ (ಉತ್ತರಪ್ರದೇಶ): ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿರುವ ಸಾಧ್ಯತೆಯಿದೆ ಎಂಬ ವರದಿ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಸಂಶೋಧನಾ ವಿದ್ಯಾರ್ಥಿಯನ್ನು ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯ ಹೊರಹಾಕಿದೆ.
ಭೂವಿಜ್ಞಾನದಲ್ಲಿ ಪಿಎಚ್ಡಿ ಮಾಡುತ್ತಿದ್ದ ಕುಪ್ವಾರಾದ ಮನ್ನಾನ್ ವಾನಿ, ಎ.ಕೆ–47 ಬಂದೂಕು ಹಿಡಿದ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿರುವ ಬಗ್ಗೆ ಖಚಿತಪಟ್ಟಿದೆ. ಇದರ ಬೆನ್ನಲ್ಲೇ, ವಿವಿಯಲ್ಲಿ ಆತ ತಂಗಿದ್ದ ಹಾಸ್ಟೆಲ್ ಮೇಲೆ ಸೋಮವಾರ ಉತ್ತರಪ್ರದೇಶ ಪೊಲೀಸರು ದಾಳಿ ನಡೆಸಿದರು.
‘ಮನ್ನಾನ್ ವಾಸವಾಗಿದ್ದ ಕೊಠಡಿ ಮೇಲೆ ದಾಳಿ ನಡೆಸಿದ ವೇಳೆ ಹಲವು ದಾಖಲಾತಿಗಳು, ಕೆಲವು ಕರಪತ್ರಗಳು ಪತ್ತೆಯಾಗಿವೆ. ಇವುಗಳನ್ನು ಪರಿಶೀಲನೆ ನಡೆಸಲಾಗುವುದು. ವಿದ್ಯಾರ್ಥಿಯು ಜನವರಿ 2ರ ತನಕ ಎಎಂಯು ಕ್ಯಾಂಪಸ್ನಲ್ಲಿದ್ದನು. ಆದಾದ ಬಳಿಕ ಕಣ್ಮರೆಯಾಗಿದ್ದಾನೆ’ ಎಂದು ಪೊಲೀಸ್ ಅಧಿಕಾರಿ ರಾಜೇಶ್ ಪಾಂಡೆ ತಿಳಿಸಿದರು.
‘ಮನ್ನಾನ್ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದನು, ಆದರೆ ಯಾವ ಸಂದರ್ಭದಲ್ಲಿ ಆತ ಭಯೋತ್ಪಾದಕರ ಸಂಪರ್ಕಕ್ಕೆ ಬಂದಿದ್ದಾನೆ ಎಂದು ತಿಳಿದುಬಂದಿಲ್ಲ. ಈಗ ನಡೆದಿರುವ ಬೆಳವಣಿಗೆಯೂ ಆತನ ಸ್ನೇಹಿತರಿಗೂ ಅಚ್ಚರಿತಂದಿದೆ’ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.