ನವದೆಹಲಿ: ‘ಭಾರತ ಯಾವುದೇ ದೇಶದ ಗಡಿ ವಶಪಡಿಸಿಕೊಳ್ಳುವ ಉದ್ದೇಶ ಹೊಂದಿಲ್ಲ. ನಮ್ಮ ದೇಶ ಲಾಭ–ನಷ್ಟಗಳನ್ನು ಲೆಕ್ಕಹಾಕುವ ಬದಲಾಗಿ ಮಾನವೀಯ ನೆಲೆಯಲ್ಲಿ ಅನ್ಯ ದೇಶಗಳೊಂದಿಗೆ ಸಂಬಂಧ ಬಲಪಡಿಸುತ್ತಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಭಾರತೀಯ ಮೂಲದ ಸಂಸದರ ಮೊದಲ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಜಾಗತಿಕ ಮಟ್ಟದಲ್ಲಿ ನಮ್ಮ ದೇಶ ರಚನಾತ್ಮಕ ಪಾತ್ರ ನಿರ್ವಹಿಸುತ್ತಾ ಬಂದಿದೆ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ ಮತ್ತು ಸತ್ಯಾಗ್ರಹ ತತ್ವಗಳು ಇಂದಿನ ಉಗ್ರವಾದ ಮತ್ತು ಮೂಲಭೂತವಾದಕ್ಕೆ ತಕ್ಕ ಉತ್ತರಗಳಾಗಿವೆ’ ಎಂದರು.
‘ಇನ್ನೊಂದು ದೇಶದ ಗಡಿಯಲ್ಲಿ ನುಗ್ಗುವುದಕ್ಕಿಂತ, ನಾವು ದೇಶದ ಸಂಪನ್ಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇವೆ’ ಎಂದರು. ಚೀನಾದೊಂದಿಗೆ ಗಡಿಯಲ್ಲಿ ಘರ್ಷಣೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.
‘ಅನ್ಯ ದೇಶಗಳ ಅಗತ್ಯತೆಗಳಿಗೆ ಅನುಗುಣವಾಗಿ ನೆರವು ನೀಡುತ್ತಿದ್ದೇವೆಯೇ ಹೊರತು ಕೇವಲ ಕೊಡುಕೊಳ್ಳುವಿಕೆ ಕಾರಣಕ್ಕಾಗಿ ಅಲ್ಲ. ಪ್ರಪಂಚ ಸೈದ್ಧಾಂತಿಕ ನೆಲೆಯಲ್ಲಿ ವಿಭಜನೆಗೊಂಡಾಗ, ಭಾರತ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿತ್ತು. ಅಭಿವೃದ್ಧಿಯಲ್ಲಿ ಎಲ್ಲರನ್ನು ಪರಿಗಣನೆಗೆ ತೆಗೆದುಕೊಳ್ಳುವ ನಮ್ಮ ದೇಶದ ಸಂದೇಶಗಳನ್ನು ಜಗತ್ತಿಗೆ ಪರಿಚಯಿಸಬೇಕಿದೆ’ ಎಂದರು.
‘ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನಮಾನ ಹೆಚ್ಚುತ್ತಿರುವುದಕ್ಕೆ ಭಾರತೀಯ ಮೂಲದ ಸಂಸದರು ಹೆಮ್ಮೆ ಪಡಬೇಕು. ಅಲ್ಲದೆ ಸ್ವದೇಶದ ಆರ್ಥಿಕ ಬೆಳವಣಿಗೆಗೆ ನೆರವಾಗಬೇಕು’ ಎಂದು ಕರೆ ನೀಡಿದರು.
‘ಸುಧಾರಣೆಗಳಿಂದಾಗಿ ಮೂರು ವರ್ಷಗಳಲ್ಲಿ ₹ 1,600 ಕೋಟಿ ವಿದೇಶಿ ನೇರ ಹೂಡಿಕೆ ದೇಶಕ್ಕೆ ಹರಿದುಬಂದಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.