ನವದೆಹಲಿ: ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯಾಧೀಶರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚೆಲಮೇಶ್ವರ್, ರಂಜನ್ ಗೊಗೋಯಿ, ಎಂ.ಬಿ. ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಸುದ್ದಿಗೋಷ್ಠಿ ನಡೆಸಿದ್ದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರ ವಿರುದ್ಧ ದನಿಯೆತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದ ಈ ನ್ಯಾಯಾಧೀಶರು, ಈ ಬಗ್ಗೆ ದೀಪಕ್ ಮಿಶ್ರಾ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಪತ್ರದ ಒಕ್ಕಣೆ ಹೀಗಿದೆ...
ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಪೀಠಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ವಿವೇಚನೆ ಹೊಂದಿದ್ದೇವೆ. ಇದರ ಬಗ್ಗೆ ಮುಖ್ಯ ನ್ಯಾಯಾಧೀಶರ ಅಧಿಕಾರ ನಡೆಯುವುದಿಲ್ಲ. ಅವರಿಗೆ ಉಸ್ತುವಾರಿ ಮಾತ್ರ ಇರುತ್ತದೆ. ನಾವೆಲ್ಲರೂ ಸಮಾನರು, ಅದರ ನೇತೃತ್ವ ಮಾತ್ರ ಮುಖ್ಯ ನ್ಯಾಯಾಧೀಶರಿಗೆ ಇರುತ್ತದೆ. ಆಚಾರಗಳನ್ನು ಗಾಳಿಯಲ್ಲಿ ತೂರುವುದು ನ್ಯಾಯಾಲದ ವಿಶ್ವಾಸರ್ಹತೆಗೆ ಧಕ್ಕೆಯನ್ನುಂಟು ಮಾಡುತ್ತದೆ. ಮನಸೋ ಇಚ್ಛೆ ನ್ಯಾಯಪೀಠಗಳನ್ನು ಬದಲಿಸುವ ಅಧಿಕಾರ ಯಾರಿಗೂ ಇಲ್ಲ. ಸುಪ್ರೀಂಕೋರ್ಟ್ ಆದೇಶಗಳು ನೀತಿ ನಿಯಮಗಳಿಗೆ ತಡೆಯೊಡ್ಡುತ್ತಿವೆ. ಹೈಕೋರ್ಟ್ ಗಳ ಕೆಲಸಗಳನ್ನೂ ಇದು ಅಡ್ಡಿ ಪಡಿಸುತ್ತದೆ.
[related]
ಸುದ್ದಿಗೋಷ್ಠಿಯಲ್ಲಿ ನ್ಯಾಯಾಧೀಶರು ಹೇಳಿದ್ದೇನು?
ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಾವೇನೂ ಕಾಳಜಿ ವಹಿಸಿಲ್ಲ ಎಂದು 20 ವರ್ಷಗಳು ಕಳೆದ ನಂತರ ಜನರು ಮಾತನಾಡಿಕೊಳ್ಳುವಂತೆ ಆಗಬಾರದು. ಹಾಗಾಗಿ ನಾವು ಜನರ ಮುಂದೆ ಬರುವುದು ಬಿಟ್ಟರೆ ನಮ್ಮಲ್ಲಿ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ . ಈ ರೀತಿ ಸುದ್ದಿಗೋಷ್ಠಿ ನಡೆಸಲು ನಮಗೇನೂ ಖುಷಿ ಅನಿಸುವುದಿಲ್ಲ.ಆದರೆ ನಡೆಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಎಂದಿದ್ದಾರೆ ಚೆಲಮೇಶ್ವರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.