ನವದೆಹಲಿ: ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳ ಪ್ರಾಧ್ಯಾಪಕರ ನೇಮಕ ಹಾಗೂ ಬಡ್ತಿಗಾಗಿ ಹೊಸ ಮೌಲ್ಯಮಾಪನ ವಿಧಾನ ಜಾರಿಗೆ ತರಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಯೋಜಿಸಿದೆ.
ಶೈಕ್ಷಣಿಕ ಸಾಧನೆ ಸೂಚಕ (ಎಪಿಐ) ಆಧಾರದಲ್ಲಿ ಬೋಧಕರಿಗೆ ವೇತನ ಹೆಚ್ಚಳ ಮತ್ತು ಬಡ್ತಿ ನೀಡುವ ಈಗಿನ ವ್ಯವಸ್ಥೆಯನ್ನು ರದ್ದುಪಡಿಸುವ ಪ್ರಸ್ತಾವನೆಯೂ ಸಚಿವಾಲಯದ ಮುಂದಿದೆ.
ಕೇಂದ್ರ ಶಿಕ್ಷಣ ಸಲಹಾ ಸಮಿತಿಯ (ಸಿಎಬಿಇ) ಎರಡು ದಿನಗಳ ಸಭೆ ಸೋಮವಾರ ಆರಂಭವಾಗಲಿದ್ದು ಅದರಲ್ಲಿ ಈ ಪ್ರಸ್ತಾವಗಳ ಬಗ್ಗೆ ಚರ್ಚೆ ನಡೆಯಲಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
‘ಎಪಿಐ ಜಾಗದಲ್ಲಿ ಹೊಸ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗವು 2010ರಲ್ಲಿ ಎಪಿಐ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಅಂದಿನಿಂದಲೇ ಇದರ ಬಗ್ಗೆ ಪರ–ವಿರೋಧ ಚರ್ಚೆಗಳು ನಡೆಯುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.