ಪಣಜಿ/ನವದೆಹಲಿ: ಮಹದಾಯಿ ನ್ಯಾಯಮಂಡಳಿ ಮುಂದೆ ಹಾಜರಾಗಲು ಸಾಕ್ಷಿಯಾಗಿರುವ ಪ್ರೊ. ಎ.ಕೆ. ಗೋಸಾಯಿ ಅವರಿಗೆ ಕರ್ನಾಟಕ ಸರ್ಕಾರ ಹಣ ನೀಡಿದೆ ಎಂದು ಗೋವಾದ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಆರೋಪಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕರ್ನಾಟಕ, ‘ರಾಜ್ಯದ ಪರವಾಗಿ ಸಾಕ್ಷ್ಯ ಹೇಳಿದ ಪ್ರೊ.ಎ.ಕೆ.ಗೋಸಾಯಿ ಅವರನ್ನು ಸರ್ಕಾರ ಖರೀದಿಸಿಲ್ಲ’ ಎಂದಿದೆ.
ಸರಣಿ ಟ್ವೀಟ್ಗಳ ಮೂಲಕ ಪಾಲ್ಯೇಕರ್ ಈ ಆರೋಪ ಮಾಡಿದ್ದರು.
‘ಸಾಕ್ಷಿಗಳಿಗೆ ಗೋವಾ ಸರ್ಕಾರ ಯಾವತ್ತೂ ಹಣ ನೀಡಿಲ್ಲ. ನಮ್ಮ ಸಾಕ್ಷಿಗಳು ರಾಜ್ಯದ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಿದ್ದಾರೆ’ ಎಂದು ಒಂದು ಪಾಲ್ಯೇಕರ್ ಹೇಳಿದ್ದರು.
‘ಕರ್ನಾಟಕವು ದಿನವೊಂದಕ್ಕೆ ₹50 ಸಾವಿರ ನೀಡಿದೆ. ಹಾಗೆಯೇ ವರದಿ ಸಿದ್ಧಪಡಿಸಲು ₹5 ಲಕ್ಷ ಕೊಟ್ಟಿದೆ ಎಂದು ಸಾಕ್ಷಿ ಎ.ಕೆ. ಗೋಸಾಯಿ ಅವರು ನ್ಯಾಯಮಂಡಳಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಮತ್ತೊಂದು ಟ್ವೀಟ್ನಲ್ಲಿ ಆರೋಪಿಸಿದ್ದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದ ಮಹದಾಯಿ ನ್ಯಾಯಮಂಡಳಿ ಮುಂದೆ ರಾಜ್ಯದ ಪರ ವಾದ ಮಂಡಿಸುವ ಹಿರಿಯ ನ್ಯಾಯವಾದಿಗಳ ತಂಡದ ಸದಸ್ಯ ಮೋಹನ್ ಕಾತರಕಿ, ‘ದೆಹಲಿ ಐಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅನುಭವಿ ಪ್ರೊಫೆಸರ್ ಗೋಸಾಯಿ ಅವರ ಸೇವೆಯನ್ನು ಅಧಿಕೃತ ಶುಲ್ಕ ನೀಡಿ ಪಡೆಯಲಾಗಿದೆ’ ಎಂದರು.
‘ದೆಹಲಿ ಐಐಟಿ, ಪ್ರೊ. ಗೋಸಾಯಿ ಹಾಗೂ ಕರ್ನಾಟಕ ಸರ್ಕಾರದ ನಡುವೆ ಈ ಸಂಬಂಧ ತ್ರಿಪಕ್ಷೀಯ ಒಪ್ಪಂದ ನಡೆದಿದೆ. ಒಪ್ಪಂದದ ಪ್ರಕಾರ, ಶುಲ್ಕದ ಒಂದು ಭಾಗ ದೆಹಲಿ ಐಐಟಿಗೆ ಸಂದಾಯವಾಗುತ್ತದೆ. ತಜ್ಞ ಸಾಕ್ಷಿದಾರರಿಗೆ ಶುಲ್ಕ ನೀಡಿಕೆಯು ಭಾರತವಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳ
ಲ್ಲಿಯೂ ಕಾನೂನುಬದ್ಧ ನಡೆ.ಅಗತ್ಯ ಬಿದ್ದರೆ ನ್ಯಾಯಮಂಡಳಿಗೆ ಈ ಸಂಗತಿಯನ್ನು ಅರಿಕೆ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಇವೇ ಅಂಶಗಳನ್ನು ಗೋಸಾಯಿ ಅವರೂ ಪುಷ್ಟೀಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.