ಮುಜಾಫರ್ನಗರ: ಮೇಘಾಶಿಕಾರ್ಪುರ್ ಗ್ರಾಮದಲ್ಲಿ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ದಲಿತ ಯುವಕನ ಮೇಲೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಪಿನ್ ಕುಮಾರ್ ಹಲ್ಲೆಗೊಳಗಾದ ಯುವಕ. ಹಲ್ಲೆ ನಡೆಸಿರುವ ವಿಡಿಯೊ ಪೊಲೀಸರಿಗೆ ಲಭ್ಯವಾಗಿದ್ದು, ಘಟನೆ ಕುರಿತಂತೆ ಹಾಗೂ ಆ ಹಿಂದೂ ಸಂಘಟನೆ ಯಾವುದು ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದಲಿತ ಯುವಕನ ಮೇಲೆ ಹಲ್ಲೆ ನಡೆಸಿದವರು ‘ಜೈ ಶ್ರೀರಾಮ್’ ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆ ಜನವರಿ 14ರಂದು ನಡೆದಿದೆ. ದಲಿತರಲ್ಲಿ ಕೆಲವು ಮಂದಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಲು ಬಯಸಿದ್ದರು. ಅಲ್ಲದೇ ಮತಾಂತರಗೊಳ್ಳಲು ಇಚ್ಚಿಸಿದ್ದ ಮಂದಿ ಮನೆಯಲ್ಲಿನ ಹಿಂದೂ ದೇವತೆಗಳ ಫೊಟೋಗಳನ್ನು ಮನೆಯಲ್ಲಿ ಇಡಲು ನಿರಾಕರಿಸಿದ್ದರು.
ಈ ಘಟನೆ ಬಗ್ಗೆ ವಿಪಿನ್ ಕುಮಾರ್ ತಂದೆ ಕೆಲವರ ವಿರುದ್ದ ಪುರ್ಕಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಲಭ್ಯವಾದ ವಿಡಿಯೋದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಫೋಟೊಗಳನ್ನು ಇರಿಸಿಕೊಳ್ಳಲು, ಆರಾಧಿಸಲು ಯಾವುದೇ ಅಡ್ಡಿಯಿಲ್ಲ. ಆದರೆ ಹಿಂದೂ ದೇವತೆಗಳ ಫೊಟೋಗಳನ್ನು ತೆಗೆದು ಹಾಕಿದ್ದು ತಪ್ಪು ಎಂದು ಹೇಳಿರುವ ಕಾರ್ಯಕರ್ತರು ವಿಪಿನ್ ಕುಮಾರ್ಗೆ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿರುವುದು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.